ಚಾಮರಾಜನಗರ: ‘ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಒಮ್ಮೆ ಸಂಚರಿಸಿ ರಸ್ತೆಗಳು, ಮೂಲ ಸೌಕರ್ಯಗಳ ದಯನೀಯ ಸ್ಥಿತಿ ನೋಡಬೇಕು’ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು. . ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯನವರು ಒಮ್ಮೆ ಕ್ಷೇತ್ರದಲ್ಲಿ ತಿರುಗಾಡಲಿ, ಏನೆಲ್ಲಾ ಅವ್ಯವಸ್ಥೆಗಳಿವೆ.. ಜನ ಹೇಗೆ ಕಷ್ಟದಲ್ಲಿ ಬದುಕುತ್ತಿದ್ದಾರೆ ನೋಡಬೇಕು. ನಾನು ಅವರ ಜೊತೆ ಹೋಗುತ್ತೇನೆ, ಹೋಗಿ ಸುತ್ತಾಡೋಣ.” ಅವರು ಮಾಡಿದ ಕೆಲಸದಿಂದ ಜನರು ತೃಪ್ತರಾಗಿದ್ದರೆ, ನಾನು ಅವರಿಗೆ ನಮಸ್ಕರಿಸುತ್ತೇನೆ ಎಂದು ಸೋಮಣ್ಣ ಹೇಳಿದರು. ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ದೇವರಾಜ ಅರಸು ಅವರಿಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ. ಜನರು ಎಲ್ಲವನ್ನೂ ನಿರ್ಧರಿಸುತ್ತಾರೆ. ಸಿದ್ದರಾಮಯ್ಯ ಅವರು ಬೇರೆಯವರನ್ನು ನಿಂದಿಸುವ ಬದಲು ವಾಸ್ತವದತ್ತ ಗಮನ ಹರಿಸಿದರೆ ಒಳ್ಳೆಯದು ಎಂದು ಹೇಳಿದರು.
ವರುಣಾದಲ್ಲಿ ಪ್ರಚಾರಕ್ಕೆ ಅಡ್ಡಿಯಾದ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ದಿನಕ್ಕಲ್ಲ, ದಿನಕ್ಕೊಂದು ಪ್ರಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಹತಾಶರಾಗಿದ್ದಾರೆ, ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗದಂತೆ ಸಹಿಸಿಕೊಂಡಿದ್ದೇನೆ ಎಂದರು.