ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು 72,713 ಮತಗಳನ್ನು ಪಡೆದು ಬಿಜೆಪಿಯ ಹಾಲಿ ಶಾಸಕ ಬಿ ಹರ್ಷವರ್ಧನ್ ಅವರನ್ನು ಸೋಲಿಸಿದ್ದಾರೆ. ಬಿ ಹರ್ಷವರ್ಧನ್ ಅವರು 40,674 ಮತಗಳನ್ನು ಪಡೆದಿದ್ದಾರೆ.
ಈ ಬಾರಿ ಇದೇ ಮೊದಲ ಬಾರಿಗೆ ಹೊಸ ಮುಖ ದರ್ಶನ್ ಧ್ರುವನಾರಾಯಣ್ ಅವರು ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ವಿ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಅವರು ಸ್ಪರ್ಧೆ ಮಾಡಿದ್ದರು. ಈ ಚುನಾವಣೆಗೆ ಜೆಡಿಎಸ್ನಿಂದ ಇಲ್ಲಿ ಅಭ್ಯರ್ಥಿಯನ್ನು ಹಾಕಲಾಗಿರಲಿಲ್ಲ.
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹರ್ಷವರ್ಧನ್ ಅವರು ಹಾಲಿ ಶಾಸಕರಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಹರ್ಷವರ್ಧನ್ ಅವರು 78,030 ಮತಗಳನ್ನು ಪಡೆದು 12,479 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದರು. ಇವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಕಳಲೆ ಕೇಶವಮೂರ್ತಿ ಅವರು 65,551 ಮತಗಳನ್ನು ಪಡೆದು ಪರಾಭಾವಗೊಂಡಿದ್ದರು. ಇನ್ನು ಜೆಡಿಎಸ್ನಿಂದ ದಯಾನಂದಮೂರ್ತಿ ಎಚ್ಎಚ್ ಅವರು 13,679 ಮತಗಳನ್ನು ಪಡೆದಿದ್ದರು.
ಇಲ್ಲಿ ಬಿಜೆಪಿಯ ಹರ್ಷವರ್ಧನ್ ಅವರು ಶೇಕಡ 47.59 ರಷ್ಟು ಮತಗಳನ್ನು ಪಡೆದರೆ ಕಾಂಗ್ರೆಸ್ನ ಕಳಲೆ ಕೇಶವಮೂರ್ತಿ ಅವರು ಶೇಕಡ 39.98ರಷ್ಟು ಮತಗಳನ್ನು ಪಡೆದಿದ್ದರು, ಇನ್ನು ಜೆಡಿಎಸ್ನ ದಯಾನಂದಮೂರ್ತಿ ಅವರು ಶೇಕಡ 8.34 ರಷ್ಟು ಮತಗಳನ್ನು ಪಡೆದಿದ್ದರು. ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 80ರಷ್ಟು ಮತದಾನವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಇಬ್ಬರು ಪ್ರಮುಖ ಅಭ್ಯರ್ಥಿಗಳಾದ ಎಚ್ಸಿ ಮಹದೇವಪ್ಪ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ್ ಅವರು ಅಕಾಲಿಕವಾಗಿ ಮರಣ ಹೊಂದಿದರು. ಆದರೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಧ್ರುವನಾರಾಯಣ್ ಅವರ ಮಗ ದರ್ಶನ್ ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದರು.
ನಂಜನಗೂಡಿನಲ್ಲಿ ಈ ಬಾರಿ ದರ್ಶನ್ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಡಿಕೆ ಸುರೇಶ್, ಚಿತ್ರನಟಿ ರಮ್ಯ ಅವರು ಪ್ರಚಾರ ಮಾಡಿದ್ದರು. ಇದಲ್ಲದೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದಾಗಲೆಲ್ಲಾ ಜನರು ದರ್ಶನ್ ಪರ ಅನುಕಂಪ ತೋರಿದ್ದರು. ಇನ್ನು ಕ್ಷೇತ್ರದಲ್ಲಿ ದರ್ಶನ್ಗೆ ಜೆಡಿಎಸ್ ಬೆಂಬಲವನ್ನು ವ್ಯಕ್ತಪಡಿಸಿತ್ತಲ್ಲದೆ ಅವರ ಗೆಲುವಿಗೆ ಪೂರಕವಾಗಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ.
ಹೀಗಾಗಿ ದರ್ಶನ್ ಗೆಲ್ಲುತ್ತಾರೆ ಎಂದು ಸಹಜವಾಗಿಯೇ ಎಂದು ಸಮೀಕ್ಷೆಗಳು ಅಂದಾಜು ಮಾಡಿದ್ದವು. ಕ್ಷೇತ್ರದಲ್ಲಿ ಹಾಲಿ ಶಾಸಕ ಹರ್ಷವರ್ಧನ್ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇತ್ತು. ಅನೇಕ ಕಡೆ ಪ್ರಚಾರಕ್ಕೆ ಹೋಗಿದ್ದಾಗ ಅವರಿಗೆ ಜನರ ತೋರಿದ ಪ್ರತಿರೋಧವೂ ಕೂಡ ಇದನ್ನು ತೋರಿಸುತ್ತಿತ್ತು.