ಹಾಸನ: ಟ್ರಕ್ ಟರ್ಮಿನಲ್ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಅಧಿಕಾರಿಗಳ ಬಗ್ಗೆ ಏಕವಚನದಲ್ಲಿ ತಪ್ಪಾಗಿ ಮಾತನಾಡಿದ್ದು, ನನ್ನ ಮಾತಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೆಚ್.ಡಿ.ರೇವಣ್ಣ ಅವರು ಕ್ಷಮೆ ಯಾಚಿಸಿದ್ದು, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಸಚಿವರ ಹಗರಣವನ್ನು ಒಂದೊಂದಾಗಿ ಬಯಲಿಗೆ ಎಳೆಯುವುದಾಗಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನನಗೆ ನೋವಾಗಿದ್ದ ಕಾರಣ ಸಿಟ್ಟಾಗಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಬಗ್ಗೆ ಏಕವಚನದಲ್ಲಿ ತಪ್ಪಾಗಿ ಮಾತನಾಡಿದ್ದೇನೆ. ನಾನು ಯಾವುದೇ ಉದ್ದೇಶವಿಟ್ಟು ಮಾತನಾಡಿಲ್ಲ. ನಾನು ಇಂಗ್ಲಿಷ್ ಬರದ ಕಾರಣ ದನ ಡಾಕ್ಟರ್ ಅಂತ ಕರೆದಿದ್ದೇನೆ. ನನ್ನ ಮಾತಿಗೆ ನಾನು ವಿಷಾಧ ವ್ಯಕ್ತಪಡಿಸುತ್ತೇನೆ ಎಂದರು. ಟ್ರಕ್ ಟರ್ಮಿನಲ್ ಪಕ್ಕದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಇದೆ. ಯಾವಾನಾದರು ಲಾರಿ ಚಾಲಕ ವಿದ್ಯಾರ್ಥಿನಿಗೆ ತೊಂದರೆ ಕೊಟ್ಟರೆ ಜಿಲ್ಲಾಧಿಕಾರಿ ಜವಬ್ದಾರಿ ತೆಗೆದುಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.
ರಾಜ್ಯದ ಉನ್ನತ ಶಿಕ್ಷಣ ಸಚಿವರು ಖಾಸಗಿ ಕಾಲೇಜುಗಳ ಜೊತೆ ಶಾಮೀಲಾಗಿದ್ದಾರೆ. ಇವರಿಗೆ ಬಡವರ ಮಕ್ಕಳಿಗೆ ಶಿಕ್ಷಣ ಕೊಡುವ ಉದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಅವರ ಹಗರಣ ಬಯಲಿಗೆಳೆಯುತ್ತೇನೆ. ಮಂತ್ರಿಗೆ ಶಿಕ್ಷಣ ಇಲಾಖೆ ಬಗ್ಗೆ ತಿಳಿದಿಲ್ಲ.
ನಾನು ಒಬ್ಬ ಹಳ್ಳಿ ಗಮಾಡ್. ಆದರೆ ನನ್ನ ಹಳ್ಳಿ ಕಾಲೇಜು ಮೊದಲ ಸ್ಥಾನದಲ್ಲಿ ಇದೆ. ಹಾಸನ ನಗರದಲ್ಲಿ ಸರ್ಕಾರಿ ಕಾಲೇಜು ಮಾಡಲು ದೇವೇಗೌಡರು ಮತ್ತು ಅವರ ಮಕ್ಕಳು ಬರಬೇಕಾಯಿತು. ನಾನು ಬಂದ ಮೇಲೆ ಹಾಸನ ನಗರದಲ್ಲಿ ಖಾಸಗಿ ಶಾಲೆಗಳ ಹೊಡೆತ ಕಡಿಮೆಯಾಗಿದೆ. ಶಿಕ್ಷಣ ಮಂತ್ರಿ ಶಿಕ್ಷಣ ಕಾಂತಿ ಮಾಡಬಹುದಿತ್ತು ಅಂದುಕೊಂಡಿದ್ದೆ. ಸರ್ಕಾರಿ ಶಾಲೆ ಕಾಲೇಜುಗಳಿಗೆ ಮೂಲ ಸೌಕರ್ಯ ಡೆಸ್ಕ್, ಬೆಂಚ್ ಹಾಗೂ ಉಪನ್ಯಾಸಕರ ಕೊರತೆ ಇರುವುದನ್ನು ಮೊದಲು ಅಶ್ವಥ್ ನಾರಾಯಣ್ ಸರಿ ಮಾಡಲಿ.
ನಾನು ಕುಮಾರಸ್ವಾಮಿ, ದೇವೇಗೌಡರಾಗಲಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಬಿಜೆಪಿ ಸರ್ಕಾರ 5 ವರ್ಷದ ಅವಧಿಯಲ್ಲಿ ಹಾಸನ ಜಿಲ್ಲೆಗೆ ಒಂದು ಲ್ಯಾಬ್ ಕೊಟ್ಟಿಲ್ಲ. ನಾನು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ 60 ಕೋಟಿ ಕೆಲಸ ಮಾಡಿದ್ದೇನೆ. ಮೊಸಳೆ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ಬಾಗಿಲು ಮುಚ್ಚಲು ಹೊರಟಿದ್ದರು.
ಆದರೆ ದೇವೇಗೌಡರು ಹೋರಾಟ ಮಾಡಿ ಗ್ರಾಮೀಣ ಪ್ರದೇಶದ ಕಾಲೇಜು ಉಳಿಸಿಕೊಟ್ಟರು. ರಾಜ್ಯದ 10 ಇಂಜಿನಿಯರಿಂಗ್ ಕಾಲೇಜು ಪೈಕಿ ಮೊಸಳೆ ಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು ದಾಖಲಾತಿಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇವತ್ತು ಒಂದು ಇಂಜಿನಿಯರಿಂಗ್ ಸೀಟು ಮೆಡಿಕಲ್ ಸೀಟಿಗೆ 40 ಲಕ್ಷ ಪಡೆಯುವ ವ್ಯಕ್ತಿಯನ್ನು ರಾಜ್ಯ ಶಿಕ್ಷಣ ಇಲಾಖೆ ಸುಧಾರಣೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಚನ ಭ್ರಷ್ಟತೆಯಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕಾಂಗ್ರೆಸ್ ನವರು ದೇವೇಗೌಡರ ಮನೆ ಬಾಗಿಲಿಗೆ ಬಂದು 5 ವರ್ಷ ಅಧಿಕಾರ ಕೊಡುವುದಾಗಿ ಕಾಲೆಳೆದರು. 50 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ 48 ತಾಲ್ಲೂಕಿನಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. ಕುಮಾರಸ್ವಾಮಿ ಕಾಲದಲ್ಲಿ 69 ಪ್ರಥಮ ದರ್ಜೆ ಕಾಲೇಜು ನೀಡಿದ್ದೇವೆ. ಈ ಮಂತ್ರಿ ಎಲ್ಲ ಸರ್ಕಾರಿ ಕಾಲೇಜು ಮುಚ್ಚುತ್ತಿದ್ದಾರೆ. ಬಾಗಿಲು ಮುಚ್ಚುವ ಮಂತ್ರಿ ಅಶ್ವಥ್ ನಾರಾಯಣ. ಹೊಳೆನರಸೀಪುರದ ಪ್ರಥಮ ದರ್ಜೆ ಕಾಲೇಜಿನ ಎಸ್.ಸಿ.ಸಮುದಾಯದ ಉಪನ್ಯಾಸಕಿಯನ್ನು ನನ್ನ ಮೇಲಿನ ಸೇಡಿಗೆ ಗುಲ್ಬರ್ಗಾಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಸಿಡಿಮಿಡಿಗೊಂಡರು.
ಈಗಿರುವ ಕಾಂಗ್ರೆಸ್ ಹೊಟ್ಟೆಪಾಡಿನ ಕಾಂಗ್ರೆಸ್. ನೆಹರೂ ಕಾಂಗ್ರೆಸ್ ಇಂದಿಲ್ಲ. ನಿರುದ್ಯೋಗಿ ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇವರಿಗೆ ನಾನು ಉತ್ತರ ಕೊಡುವುದಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇವರು ನನ್ನ ಬಗ್ಗೆ ಮಾತನಾಡಿದ್ದರೆ ಮಾತ್ರ ಉತ್ತರ ಕೊಡುತ್ತೇನೆ ಎಂದರು.