ಬೇಲೂರು: ಹಲವು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಸಂಚರಿಸಲಾಗದಂತಹ ದುಸ್ಥಿತಿಗೆ ತಲುಪಿದ್ದರೂ ದುರಸ್ತಿ ಮಾಡದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಬಸ್ ತಡೆದು ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಬಿಕ್ಕೋಡು ಹೋಬಳಿಯ ಬಿಳಗುಲಿ ಗ್ರಾಮದಲ್ಲಿ ನಡೆದಿದೆ.
ಕೋಗಿಲೆಮನೆ- ಮದಘಟ್ಟ- ಪಡುವಳಲು ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ರೈತರು ದಿನನಿತ್ಯ ಕೆಲಸ ಕಾರ್ಯಗಳಿಗೆ ಇದೇ ಮಾರ್ಗವಾಗಿ ತೆರಳಬೇಕು.ಆದರೆ ಸುಮಾರು ಐದಾರು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿ ಗುಂಡಿಬಿದ್ದಿದ್ದರೂ ಸಹ ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸಿಲ್ಲ ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಈ ವೇಳೆ ಗ್ರಾಮಪಂಚಾಯತಿ ಸದಸ್ಯ ಕವೀಶ್ ಹಾಗೂ ಗ್ರಾಮಸ್ಥರಾದ ಮಲ್ಲಿಕ್ ಅವರು, ಮಾತನಾಡಿ ‘ಮಳೆಗಾಲ ಬಂತೆಂದರೆ ರಸ್ತೆಗಳು ಸಂಪೂರ್ಣ ಹಾಳಾಗುತ್ತವೆ. ಸುಮಾರು ಮೂರ್ನಾಲ್ಕು ಅಡಿಗಳಷ್ಟು ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದೆ. ಹೀಗಾಗಿ ಈ ರಸ್ತೆ ಸರಿ ಇಲ್ಲ ಎಂದು ನೆಪವೊಡ್ಡಿ ಬಸ್ ಸಂಚಾರ ನಿಲ್ಲಿಸಲಾಗುತ್ತದೆ. ಅಲ್ಲದೆ ಖಾಸಗಿ ವಾಹನಗಳು ಈ ಭಾಗದಲ್ಲಿ ಬರಲು ಹಿಂಜರಿಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ವೃದ್ಧರಿಗೆ ತುಂಬಾ ತೊಂದರೆಯಾಗಿದೆ’ ಎಂದು ದೂರಿದರು.
ದ್ವಿಚಕ್ರ ವಾಹನ ಸವಾರರು ರಾತ್ರಿ ಸಮಯದಲ್ಲಿ ಗುಂಡಿಗಳನ್ನು ದಾಟಲು ಹೋಗಿ ಬಿದ್ದಂತ ಘಟನೆಗಳು ನಡೆದಿದೆ. ತಕ್ಷಣವೇ ಇದರ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಗಮನ ಹರಿಸಬೇಕು ಅಲ್ಲದೆ ಗ್ರಾಮಪಂಚಾಯತಿ ಸಭೆಗಳಲ್ಲೂ ಸಹ ಎಷ್ಟೋ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತಕ್ಷಣವೇ ರಸ್ತೆ ಕಾಮಗಾರಿ ಮಾಡಬೇಕು ಇಲ್ಲದಿದ್ದರೆ ಮುಂಬರುವ ಚುನಾವಣೆಯಿಂದ ಈ ಗ್ರಾಮದ ಮತದಾರರು ದೂರ ಉಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ವಕೀಲ ಕುಮಾರ್, ಚಂದ್ರಶೇಖರ್ ಧರಣಿ, ಲಿಂಗರಾಜು, ಜಯದೇವ್, ಆರಾಧ್ಯ, ಕಿಶೋರ್, ಬಿಳುಗುಲಿ, ಮದಘಟ್ಟ, ಮಾಳೇಗೆರೆ ಗ್ರಾಮಸ್ಥರು ಹಾಜರಿದ್ದರು.