ಹಾಸನ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನಗಳು ಉದ್ಭವವಾದರೂ ಅದನ್ನು ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಸಚಿವ ಕೋಟಾ ಶ್ರೀನಿವಾಸಪೂಜಾರಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲ ಅಸಮಾಧಾನಗಳು ಪಕ್ಷದಲ್ಲಿ ಉಂಟಾಗಬಹುದು ಸಹಜ ಆದರೆ ಅದನ್ನು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ನಿಭಾಯಿಸುವ ಕೆಲಸವನ್ನು ಹಿರಿಯನಾಯಕರು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ, ಆನಂದ್ ಸಿಂಗ್, ಡಿಕೆಶಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯ ಭೇಟಿಗಳನ್ನು ಮಾಡುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ.
ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ನಾಲ್ಕೈದು ವರ್ಷಗಳು ಕಳೆದರೂ ಇದುವರೆಗೂ ಮೋಟರ್ ಅಳವಡಿಸಿರುವುದಿಲ್ಲ. ಇನ್ನೆಷ್ಟು ವರ್ಷ ಬೇಕಾಗುತ್ತದೆ ಎಂಬಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ವಿಧಾನಸಭೆಯಲ್ಲೂ ಕೂಡ ಪ್ರಸ್ತಾಪವಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಟೆಂಡರ್ ಕರೆದಾಗ ಯಾರಿಗೆ ಟೆಂಡರ್ ಆಗಿದೆ, ಉಳಿದವರು ನ್ಯಾಯಾಲಯದ ಮೊರೆ ಹೋಗಿದ್ದು, ಮೇಲ್ಮನವಿ ಹೋಗಿ ತಡವಾಗಿದೆ. ಈಗ ಗಂಗಾ ಕಲ್ಯಾಣ ಯೋಜನೆಯಲ್ಲಿ ಅನುಮತಿ ಕೊಟ್ಟು ನಿರ್ದೇಶನ ನೀಡಿದ್ದಾರೆ. ಕೊಳವೆ ಬಾಯಿ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಎರಡು ಸದನದಲ್ಲೂ ಚರ್ಚೆಯಾಗಿದ್ದು, ಸದನದ ಸಮಿತಿಯನ್ನು ಮಾಡಲಾಗಿದ್ದು, ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಏನೆನು ಲೋಪ ಆಗಿದೆ ಬಗ್ಗೆ ತನಿಖೆ ಮಾಡಲಾಗುತ್ತಿದೆ. ತನಿಖಾ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. ಕೊಳವೆ ಬಾವಿಗೆ ಯಾರಾರು ಅರ್ಜಿ ಹಾಕಿದ್ದಾರೆ ಅವರ ಖಾತೆಗೆ ನೇರ ಹಣ ಹಾಕುವ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ ಎಂದರು. ಇನ್ನು ಮುಂದೆ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುವ ಕೆಲಸ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.