ಹಾಸನ: ಜಿಲ್ಲೆಯಲ್ಲಿ ಈಗಾಗಲೇ ಹಲವು ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಹಸಿರುಭೂಮಿ ಪ್ರತಿಷ್ಠಾನ ಗಮನಸೆಳೆದಿದೆ.
ಈ ನಡುವೆ ನಗರದ ಅಬ್ದುಲ್ ಕಲಾಂ 80 ಅಡಿ ರಸ್ತೆಯ ಉದ್ದಕ್ಕೂ ಹುಣಸಿನಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಸಾಮೂಹಿಕ ಶ್ರಮದಾನದೊಂದಿಗೆ ಸ್ವಚ್ಛತೆ ಮಾಡಲಾಯಿತು.
ಸ್ವಚ್ಚತೆ ಕಾಪಾಡುವಲ್ಲಿ ಹಸಿರುಭೂಮಿ ಪ್ರತಿಷ್ಠಾನವು ಪ್ರೇರಣೆ ಕೊಡುತ್ತಿದ್ದು, ಇದರ ಜೊತೆಯಲ್ಲಿ ಹುಣಸಿನಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ, ಮುಂಜಾನೆ ಮಿತ್ರ ತಂಡ, ತಮ್ಲಾಪುರ ಕೆರೆ ಅಭಿವೃದ್ಧಿ ಸಮಿತಿ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಬೂವನಹಳ್ಳಿ ಕೆರೆ ಅಭಿವೃದ್ಧಿ ಸಮಿತಿ, ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿ, ವೈದ್ಯಕಿಯ ಮಿತ್ರರು ಹಾಗೂ ಪರಿಸರ ಆಸಕ್ತರು ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಸೇರಿ 80 ಅಡಿ ರಸ್ತೆಯ ಡಿವೈಡರ್ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ.
ಸ್ವಚ್ಛತೆಯನ್ನು ಕೇವಲ ನಮ್ಮಿಂದ ಮಾತ್ರ ಮಾಡಲು ಸಾಧ್ಯವಿಲ್ಲ. ನಾವು ಮಾಡುವ ಸ್ವಚ್ಛತೆಯು ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಅಕ್ಕ-ಪಕ್ಕದ ನಿವಾಸಿಗಳು ಸ್ವಚ್ಛತೆ ಬಗ್ಗೆ ಅರಿತು ಕೈಜೋಡಿಸಬೇಕು. ನಮ್ಮ ಏರಿಯಾವನ್ನು ಶುಚಿತ್ವದಿಂದ ಇಟ್ಟುಕೊಳ್ಳಬೇಕು ಎನ್ನುವ ಮನಸ್ಸು ಬರಬೇಕು. ಮನೆ ಮುಂದೆ ನಿಮ್ಮ ನಿಮ್ಮ ಏರಿಯಾವನ್ನು ಮೊದಲು ಸ್ವಚ್ಛತೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹಸಿರುಭೂಮಿ ಪ್ರತಿಷ್ಠಾನದ ಸಂಘಟಕರು ತಿಳಿಸಿದ್ದಾರೆ.
ಇದೇ ವೇಳೆ ಹಸಿರುಭೂಮಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಸ್ಕೌಟ್ ಅಂಡ್ ಗೈಡ್ಸ್ ಕಾಂಚನ ಮಾಲಾ, ಮುಂಜಾನೆ ಮಿತ್ರ ತಂಡದ ಅಧ್ಯಕ್ಷ ವೆಂಕಟೇಗೌಡ, ರಾಮಣ್ಣ, ಹುಣಸಿನ ಕೆರೆ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸಯ್ಯಾದ್ ತಾಜ್, ಜನನಿ ಪೌಂಢೇಶನ್ ಅಧ್ಯಕ್ಷರಾದ ಭಾನುಮತಿ, ಹಸಿರುಭೂಮಿ ಪ್ರತಿಷ್ಠಾನದ ಚಿನ್ನೇನಹಳ್ಳಿ ಸ್ವಾಮಿ, ತೋಫಿಕ್ ಅಹಮದ್, ಸುರೇಶ್, ಭವಾನಿ, ರಾಮೇಗೌಡ, ರಾಜೀವೆಗೌಡ, ಗೌಡೇಗೌಡ, ದೇವಿಕಾ ಮಧು, ಡಾ. ಕೆ.ಸಿ. ತೇಜಸ್ವಿ, ಡಾ. ಮಂಜುನಾಥ್, ಗೀತಾ ಇತರರು ಉಪಸ್ಥಿತರಿದ್ದರು.