News Kannada
Wednesday, May 31 2023
ಹಾಸನ

ಹಾಸನ: ಪ್ರಜಾಧ್ವನಿ ಯಾತ್ರೆಯು ರಾಜಕೀಯ ಪ್ರಹಸನ- ಎಚ್.ಕೆ.ಸುರೇಶ್ ಟೀಕೆ

Photo Credit : News Kannada

ಹಾಸನ: ಅಧಿಕಾರದಲ್ಲಿದ್ದಾಗ ಪ್ರಜೆಗಳ ಧ್ವನಿಯನ್ನು ಆಲಿಸದೆ ತುಘಲಕ್ ದರ್ಬಾರ್ ನಡೆಸಿದ ಸಿದ್ದರಾಮಯ್ಯ ಈಗ ಮತ್ತೆ ಅಧಿಕಾರಕ್ಕೇರಲು ಡಿಕೆ ಶಿವಕುಮಾರ್ ಜೊತೆ ಪ್ರಜಾಧ್ವನಿ ಯಾತ್ರೆ ಆರಂಭಿಸಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾಗ ಮಹದಾಯಿ ಮತ್ತು ಕೃಷ್ಣಾ ನದಿಗಳ ನೀರಾವರಿ ಯೋಜನೆಗೆ ಅಡ್ಡಗಾಲಿಟ್ಟು ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಟ್ಟು ಸೋನಿಯಾ ಮಾತೆಗೆ ತಲೆಬಾಗಿದರು.

ಈಗ ಬಿಜೆಪಿಯ ಡಬಲ್ ಇಂಜಿನ್ ಸರಕಾರ ನೀರಾವರಿ ಯೋಜನೆಗಳಿಗೆ ಅಧಿಕೃತ ಮುದ್ರೆ ಒತ್ತಿದಾಗ, ಅಡ್ಡಗಾಲಿಟ್ಟು ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿರುವುದೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಉದ್ದೇಶ ಎಂದು ದೂರಿದರು.

ಇದು ಪ್ರಜಾಧ್ವನಿ ಅಲ್ಲ ಪ್ರಜಾಹಾನಿಯ ಉದ್ದೇಶ ಇಟ್ಟುಕೊಂಡಿರುವ ಯಾತ್ರೆ. ಶೀಘ್ರದಲ್ಲೇ ಪ್ರಜಾಧ್ವನಿಯ ಇಬ್ಬರು ಸಾರಥಿಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಎತ್ತು ಏರಿಗಿಳಿದರೆ ಎಮ್ಮೆ ನೀರಿಗೆಳೆದಂತೆ ಕಾಂಗ್ರೆಸ್ ಬಸ್ಸನ್ನು ತಮ್ಮ ಮನ ಬಂದಂತೆ ವಿರುದ್ಧ ದಿಕ್ಕಿಗೆ ಎಳೆದು ಕಾಂಗ್ರೆಸ್ ರಥದ ಟಯರ್ ಪಂಚರ್ ಮಾಡಲಿದ್ದಾರೆ ಎಂದು ಟೀಕಿಸಿದರು.

ಐಸಿಎಸ್ ನಂಟು: ಇ.ಡಿ – ಸಿ.ಬಿ.ಐ ವಿಚಾರಣೆ
ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ ಅವರು ಕರಾವಳಿ ಕರ್ನಾಟಕದ ಮೂಲಕ ಶಿವಮೊಗ್ಗ ಜಿಲ್ಲೆಗೆ ಐಸಿಸ್ ಮಾದರಿಯ ಕೇರಳ ಮೂಲದ ಭಯೋತ್ಪಾದಕರ ನುಸುಳುವಿಕೆಗೆ ಶಿವಮೊಗ್ಗ ಜಿಲ್ಲೆಗೆ ಕರಾವಳಿಯ ಹೆಬ್ಬಾಗಿಲಾಗಿರುವ ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯನ್ನು ಕೇಂದ್ರವಾಗಿರಿಸಿಕೊಂಡಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರವಾದವನ್ನು ವಿರೋಧಿಸುವ ಕಾಂಗ್ರೆಸ್ ನಾಯಕರು ಭಯೋತ್ಪಾದಕರಿಗೆ ನೇರವಾಗಿ ಸಹಕಾರ ನೀಡುತ್ತಿದ್ದಾರೆ ಎಂಬುದಕ್ಕೆ ಕಿಮ್ಮನೆ ರತ್ನಾಕರ ಶಂಕಿತ ಭಯೋತ್ಪಾದಕರಿಗೆ ತಮ್ಮ ಸ್ವಂತ ಕಟ್ಟಡವನ್ನು ಬಾಡಿಗೆಗೆ ನೀಡಿರುವುದೇ ನಿದರ್ಶನ.

ಕಾಂಗ್ರೆಸ್ ಭಯೋತ್ಪಾದನೆಯ ಬಗ್ಗೆ ಕೇವಲ ಮೃದು ಧೋರಣೆ ತಾಳುವುದಷ್ಟೇ ಅಲ್ಲ, ಬದಲಾಗಿ ಸಕ್ರಿಯವಾಗಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಾ ಅವರಿಗೆ ಕಾಲ ಕಾಲಕ್ಕೆ ದುಡ್ಡಿನ ಸಹಾಯವನ್ನೂ ಮಾಡುತ್ತಿದ್ದಾರೆ. ಬ್ರಹ್ಮಾವರದಲ್ಲಿ ಬಂಧಿತನಾದ ಶಂಕಿತ ಭಯೋತ್ಪಾದಕ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಾಯಕನ ಮಗ – ಇದು ಕಾಂಗ್ರೆಸ್ ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆ ತಾಳಿರುವುದಕ್ಕೆ ಉತ್ತಮ ಉದಾಹರಣೆ ಡಿ ಕೆ ಶಿವಕುಮಾರ್ ಮಂಗಳೂರು ಕುಕರ್ ಬ್ಲಾಸ್ಟ್ ಪ್ರಕರಣದಲ್ಲಿ ಶಂಕಿತ ಭಯೋತ್ಪಾದಕನಿಗೆ ಬೆಂಬಲ ವ್ಯಕ್ತಪಡಿಸಿದ್ದು ಮತ್ತು ಹಲವಾರು ಕಾಂಗ್ರೆಸ್ ನಾಯಕರು ಅವರ ಹೇಳಿಕೆಯನ್ನು ಸಮರ್ಥಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ದೇಶದ ಸುರಕ್ಷತೆಯ ಬಗ್ಗೆ ಇರುವ ಬದ್ಧತೆಯನ್ನು ಪ್ರಶ್ನಿಸಬೇಕಾಗಿದೆ.

ಉಚಿತ ವಿದ್ಯುತ್ ಘೋಷಣೆ – ಲೊಳಲೊಟ್ಟೆ
ದೇಶದಲ್ಲಿ ೬೦ ವರ್ಷ ಆಡಳಿತ ನಡೆಸಿದಾಗ ವಿದ್ಯುತ್ ಸಂಪರ್ಕ ಕಲ್ಪಿಸದ ಕಾಂಗ್ರೆಸ್ ಪಕ್ಷ ಈಗ ಉಚಿತ ವಿದ್ಯುತ್ ನೀಡಲು ಹೊರಟಿದೆ. ಇದಕ್ಕಿಂತ ತಮ್ಮ ಬಗ್ಗೆ ತಾವೇ ಜೋಕ್ ಮಾಡಿಕೊಳ್ಳುವ ಉದಾಹರಣೆ ಇನ್ನೊಂದಿರಲಾರದು. ಸಿದ್ದರಾಮಯ್ಯ ಸರಕಾರದಲ್ಲಿ ವಿದ್ಯುತ್ ಖಾತೆಯ ಸಚಿವರಾಗಿದ್ದ ಡಿಕೆ ಶಿವಕುಮಾರ್ ರಾಜ್ಯದ ಜನತೆಗೆ ಲೋಡ್ ಶೆಡ್ಡಿಂಗ್ ಮೂಲಕ ಕತ್ತಲೆ ಭಾಗ್ಯ ಕರುಣಿಸಿದ್ದು ಜನಜನಿತ – ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಬದಲಿಗೆ ಉಚಿತ ಕತ್ತಲೆ ಭಾಗ್ಯ ದೊರಕುವುದು ಖಾತ್ರಿ. ವಿಧಾನ ಸೌಧದಲ್ಲಿ ಟಾರ್ಚ್ ಹಿಡಿದು ಬಜೆಟ್ ಮಂಡನೆ ಮಾಡುವ ಪರಿಸ್ಥಿತಿಗೆ ಬಂದ ಕಾಂಗ್ರೆಸ್ ಸರಕಾರ ರಾಜ್ಯದ ಜನರಿಗೆ ಅದೇ ಭಾಗ್ಯ ಕರುಣಿಸುವುದು ಖಾತ್ರಿ. ಕಾಂಗ್ರೆಸ್‌ನಿಂದ ಸಕಾರಾತ್ಮಕ ಬೆಳವಣಿಗೆ ಬದಲಾವಣೆ ಎಂದಿಗೂ ಸಾಧ್ಯವಿಲ್ಲ.

See also  ಹಾಸನ: ವ್ಯಕ್ತಿಯ ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿ- ಶಾಸಕ ಪ್ರೀತಮ್‌ಗೌಡ

ಸಿಎಂ ಇಬ್ರಾಹಿಂ – ಯೋಗಿ ಆದಿತ್ಯನಾಥ್ ಹೇಳಿಕೆ – ಅತಿಯಾದ ಮುಸ್ಲಿಂ ಓಲೈಕೆ
ಉತ್ತರ ಪ್ರದೇಶ್ ಸಿಎಂ ಯೋಗಿ ಆದಿತ್ಯನಾಥ ಅವರ ಗೋರಖ್ ನಾಥ ಪೀಠ ಸಹ ಒಕ್ಕಲಿಗರು ಪೂಜಿಸುವ ಶ್ರೀ ಆದಿಚುಂಚನಗಿರಿ ಮಠದ ಸಂಪ್ರದಾಯಕ್ಕೆ ಸೇರಿರುವ ನಾಥ ಪಂಥದ ಮಠವೇ ಆಗಿದೆ. ಗೋರಖಪುರ ಪೀಠ ನಾಥ ಪರಂಪರೆಯ ಉಚ್ಛ್ರಾಯ ಪೀಠ. ಇದರ ಪೀಠಾಧಿಪತಿಗಳಿಗೆ ಯಾರನ್ನಾದರೂ ಲವ್ ಮಾಡಬೇಕು ಎಂದು ಅಪ್ರಬುದ್ಧ ಹೇಳಿಕೆ ನೀಡುವ ಜನತಾ ದಳದ ರಾಜ್ಯಾಧ್ಯಕ್ಷರದ್ದು ಹರಿಬಿಟ್ಟ ನಾಲಿಗೆ ಅಲ್ಲವೇ? ಎಂದು ಪ್ರಶ್ನಿಸಿದರು.

ಒಂದು ಕಡೆ ಮಠ, ದೇವಸ್ಥಾನ, ಹೋಮ, ಹವನ, ಪಂಚಾಂಗ ಎಲ್ಲ ಮಾಡಿಕೊಂಡು ಹಿಂದೂ ಸಂಪ್ರದಾಯಗಳನ್ನು ಆಚರಿಸುವ ನಾಟಕ ಇನ್ನೊಂದು ಕಡೆ ಹೀಗೆ ಒಬ್ಬ ಮುಸಲ್ಮಾನನ್ನ ಬಿಟ್ಟು ಖಾವಿ ಧರಿಸಿ ಹಿಂದುತ್ವ ಸಂಪ್ರದಾಯವೇ ತನ್ನ ಜೀವನ ಎಂದುಕೊಂಡಿರುವ ಶ್ರೀ ಆದಿತ್ಯನಾಥ್ ರ ಬಗ್ಗೆ ಜನತಾದಳ ಪಕ್ಷ ಮಾತನಾಡಿಸುತ್ತಿದೆ.

ಜನತಾದಳಕ್ಕೆ ಈ ಬಾರಿ ಗೆಲ್ಲಲು ಮುಸ್ಲಿಂ ವೋಟ್ ಬೇಕು ಎನ್ನುವುದು ಖಾತ್ರಿಯಾಗಿದೆ. ಜೊತೆಗೆ, ಹಿಂದೂಗಳ ಬಗ್ಗೆ ಏನೇ ಹೇಳಿದರೂ ತಮ್ಮ ಒಕ್ಕಲಿಗ ಅಸ್ಮಿತೆಯನ್ನು ಮುಂದಿಟ್ಟುಕೊಂಡು ನೀಗಿಸಿಕೊಳ್ಳಬಹುದು ಎಂದು ಕುಮಾರಸ್ವಾಮಿ ತಾವೇ ಯೋಚಿಸುತ್ತಿದ್ದಾರೆ ಎಂದು ದೂರಿದರು.

ನಾಗಮಂಗಲದಲ್ಲಿ ಕಳೆದ ಒಂದು ತಿಂಗಳಲ್ಲಿ ಅಪ್ರಾಪ್ತ ವಯಸ್ಸಿನ ಹಿಂದು ಹುಡುಗಿಯರ ಮೇಲೆ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಎರಡು ಪ್ರಕರಣಗಳಲ್ಲೂ ಸದಾ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳು ಯಾವುದೇ ಮಾತು ಎತ್ತದೇ ಇರುವುದು ಈ ಪಕ್ಷಗಳ ಬದ್ಧತೆಯ ಬಗ್ಗೆ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ ಎಂದರು.

ಸದಾ ದಲಿತರ ಪರ ಕಾಳಜಿಯ ದನಿ ಎತ್ತುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಾಗಮಂಗಲದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ದಲಿತ ಸಮಾಜದ ಯುವತಿಯ ಪರ ದನಿ ಎತ್ತದೆ ಇರುವುದಕ್ಕೆ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿರುವುದೇ ಕಾರಣ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನವಿಲೇ ಅಣ್ಣಪ್ಪ ,ಪ್ರವೀಣ್, ಪ್ರಸನ್ನ ಕುಮಾರ್, ಮಣಿಕಂಠ , ವಿಜಯ್ ಕುಮಾರ್  ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು