News Kannada
Sunday, April 02 2023

ಹಾಸನ

ಹಾಸನ: ಗೊಂದಲದ ನಡುವೆಯೂ ಹಾಸನದಲ್ಲಿ ಭವಾನಿ-ರೇವಣ್ಣ ಪ್ರಚಾರ

Bhavani-Revanna campaign in Hassan despite confusion
Photo Credit : News Kannada

ಹಾಸನ: ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಬಗೆ ಹರಿಸಲು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಈ ಬಗ್ಗೆ ಭಾನುವಾರ ಬೆಂಗಳೂರಿನಲ್ಲಿ ಹಾಸನ ಕ್ಷೇತ್ರದ ಪ್ರಮುಖ ಕಾರ್ಯಕರ್ತರು, ಮುಖಂಡರ ಸಭೆ ಕರೆದಿರುವ ಕುಮಾರಸ್ವಾಮಿ, ಟಿಕೆಟ್ ಹಂಚಿಕೆ ಬಗ್ಗೆ ಅವರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಈ ಸಭೆಯಲ್ಲಿ ಮಾಜಿ ಜಿಪಂ ಸದಸ್ಯರು, ತಾಪಂ ಮಾಜಿ ಸದಸ್ಯರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಪ್ರಮುಖರು ಭಾಗಿಯಾಗಲಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರ ಕಚೇರಿಯಿಂದಲೇ ಹಾಸನದ ಪ್ರಮುಖ ಕಾರ್ಯಕರ್ತರಿಗೆ ಸಭೆಗೆ ಹಾಜರಾಗುವಂತೆ ಫೋನ್ ಮೂಲಕ ಆಮಂತ್ರಣ ಹೋಗಿದ್ದು, ಈ ಸಭೆಯಲ್ಲಿ ಸುಮಾರು ೩೦೦ ಜನ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಹಾಸನದಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಹಂಚಿಕೆ ಗೊಂದಲ ಇನ್ನೂ ಬಗೆಹರಿದಿಲ್ಲ. ದಿನೇ ದಿನೇ ಯಾರಿಗೆ ಟಿಕೆಟ್ ನೀಡಬೇಕು ಅನ್ನೋ ಸಮಸ್ಯೆ ವೃದ್ಧಿಯಾಗುತ್ತಲೇ ಇದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗೌಡರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದೆ ಎಚ್‌ಪಿ ಸ್ವರೂಪ್ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ವಾದಿಸಿದ್ರೆ, ಅತ್ತ ಶಾಸಕ ಪ್ರೀತಂ ಗೌಡರನ್ನು ಸೋಲಿಸಲು ಗೌಡರ ಕುಟುಂಬದ ಸದಸ್ಯರೇ ಚುನಾವಣೆಗೆ ನಿಲ್ಲಬೇಕು ಎಂಬುದು ಎಚ್‌ಡಿ ರೇವಣ್ಣ ಫ್ಯಾಮಿಲಿಯ ಒತ್ತಾಯ.

ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲದ ನಡುವೆಯೇ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ಇಂದು ಕೂಡ ಹಾಸನದಲ್ಲಿ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಶಾಸಕ ಪ್ರೀತಂ ಗೌಡ ಹಾಕಿರುವ ಸವಾಲನ್ನು ಈಗಾಗಲೇ ಸ್ವೀಕರಿಸಿರುವ ಎಚ್‌ಡಿ ರೇವಣ್ಣ ಇಂದು ಹಾಸನ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ ಪ್ರಚಾರವನ್ನು ಮುಂದುವರಿಸಲಿದ್ದಾರೆ.

ಎಚ್‌ಡಿಕೆ ವಿರೋಧದ ಮಧ್ಯೆಯೂ ರೇವಣ್ಣ ಪ್ರಚಾರ: ಎಚ್‌ಡಿ ಕುಮಾರಸ್ವಾಮಿ ವಿರೋಧದ ನಡುವೆಯೂ ಪ್ರಚಾರ ಪ್ರಾರಂಭಿಸಿರೋ ಎಚ್‌ಡಿ ರೇವಣ್ಣ ಮತ್ತು ಕುಟುಂಬ, ಎಚ್‌ಪಿ ಸ್ವರೂಪ್ ಅವರ ಮಿಂಚಿನ ಸಂಚಾರದಿಂದ ಸೃಷ್ಟಿಯಾಗಿರುವ ಗೊಂದಲದ ನಿವಾರಣೆಗೆ ತಂತ್ರ ರೂಪಿಸಿದ್ದು, ರೇವಣ್ಣ ಕುಟುಂಬದಿಂದಲೇ ಈ ಬಾರಿ ಚುನಾವಣೆಗೆ ಅಭ್ಯರ್ಥಿ ನಿಲ್ಲಲಿದ್ದಾರೆ ಎನ್ನುವ ಸಂದೇಶವನ್ನು ಜನರಿಗೆ ತಲುಪಿಸಲು ಪ್ಲಾನ್ ರೂಪಿಸಿದ್ದಾರೆ. ಇದರ ಭಾಗವಾಗಿ ಗ್ರಾಮೀಣ ಭಾಗದ ಜನರನ್ನು ತಲುಪಲು ಮುಂದಾಗಿರುವ ಎಚ್‌ಡಿ ರೇವಣ್ಣ, ನಿನ್ನೆಯಿಂದಲೆ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಹೀಗಾಗಿ ಶತಾಯ ಗತಾಯ ಈ ಬಾರಿ ಹಾಸನದ ಟಿಕೆಟ್‌ನ್ನು ಪಡೆಯಲೇ ಬೇಕು ಎಂದು ಪಣ ತೊಟ್ಟಂತಿದೆ.

ಬೆಂಗಳೂರಿನಲ್ಲಿ ಮುಖಂಡರ ಸಭೆ: ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿ ಯಾರಾದರೆ ಗೆಲುವು ಸುಲಭವಾಗಲಿದೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಆ ಬಳಿಕ ಎಲ್ಲರ ಅಭಿಪ್ರಾಯ ಏನಿದೆ ಎಂದು ನೋಡಿಕೊಂಡು ಹಾಸನ ಟಿಕೆಟ್ ಯಾರಿಗೆ ನೀಡಬೇಕು ಎಂಬ ಬಗ್ಗೆ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ. ಇನ್ನೊಂದೆಡೆ ಹಾಸನ ಕ್ಷೇತ್ರದ ಬಗ್ಗೆ ಗೌಪ್ಯ ಸರ್ವೇ ಮಾಡಿಸಿ ವರದಿ ತರಿಸಿಕೊಂಡಿರುವ ಕುಮಾರಸ್ವಾಮಿ ಅವರು, ಆ ವರದಿಯಲ್ಲಿರುವ ಅಂಶಗಳು ಮತ್ತು ಸಭೆಯಲ್ಲಿ ಪ್ರಮುಖ ಮುಖಂಡರ ಅಭಿಪ್ರಾಯವನ್ನು ನೋಡಿಕೊಂಡು ಟಿಕೆಟ್ ತೀರ್ಮಾನ ಮಾಡಲಿದ್ದಾರೆ.

See also  ಬೆಂಗಳೂರು: ಭಾರತ್ ಜೋಡೋ ಯಾತ್ರೆ ವೇಳೆ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರಿಗೆ ವಿದ್ಯುತ್ ಶಾಕ್

ಇನ್ನು ಹಾಸನದ ಟಿಕೆಟ್ ಭವಾನಿ ರೇವಣ್ಣ ಅವರಿಗೆ ನೀಡುವ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಎಚ್‌ಡಿ ಕುಮಾರಸ್ವಾಮಿ ಸ್ವರೂಪ್ ಬೆನ್ನಿಗೆ ನಿಂತಿದ್ದು, ಈ ಹಿಂದೆಯೇ ಸ್ವರೂಪ್ ಅವರನ್ನು ಜೆಡಿಎಸ್ ಪಕ್ಷದ ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಲಾಗಿತ್ತು. ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಮುಗಿಸಿರುವ ಸ್ವರೂಪ್, ಟಿಕೆಟ್ ಬಗ್ಗೆ ಕುಮಾರಸ್ವಾಮಿ ಮೇಲೆಯೇ ಪೂರ್ಣ ಭರವಸೆ ಇಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಏನು ತೀರ್ಮಾನ ಆಗಬಹುದು ಎಂಬುದು ಭಾರೀ ಕುತೂಹಲ ಮೂಡಿಸಿದೆ.

ಎಚ್‌ಡಿಕೆಯನ್ನು ಹೊಗಳಿದ ಭವಾನಿ ರೇವಣ್ಣ: ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿತ್ತು, ಹಲವು ಹಿರಿಯ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಇದಲ್ಲದೆ ಹಾಸನ ವಿಧಾನಸಭಾ ಕ್ಷೇತ್ರ ಸದ್ಯ ಹಲವು ಕಾರಣಗಳಿಂದ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.

ಇದಕ್ಕೆ ಕಾರಣ ಭವಾನಿ ರೇವಣ್ಣ. ಈ ಹಿಂದೆ ವೇದಿಕೆಯೊಂದರಲ್ಲಿ ಭವಾನಿ ರೇವಣ್ಣ ಮಾತನಾಡುತ್ತಾ, ಹಾಸನದಿಂದ ಈ ಬಾರಿ ಸ್ಪರ್ಧಿಸುವುದಾಗಿ ಹೇಳಿದ್ದರು. ಇದು ಜೆಡಿಎಸ್ ಪಾಳಯದಲ್ಲಿ ದೊಡ್ಡ ಸಂಚಲನದ ಹುಟ್ಟಿಗೆ ಕಾರಣವಾಗಿತ್ತು.

ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದರೂ, ಬಹುತೇಕ ಮಂದಿ ಭವಾನಿ ರೇವಣ್ಣ ಅವರಿಗೆ ಹಾಸನದಿಂದ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇದೀಗ ನಿಟ್ಟೂರಿನಲ್ಲಿ ಭವಾನಿ ರೇವಣ್ಣ ಮಾತನಾಡುತ್ತಾ, ಕುಮಾರಸ್ವಾಮಿ ಅವರನ್ನು ಹಾಡಿ ಹೊಗಳಿದ್ದಾರೆ.

೨೦೨೩ರಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಕುಮಾರಣ್ಣ ಬಿಸಿಲನ್ನು ಲೆಕ್ಕಿಸದೆ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಕಳೆದ ಬಾರಿ ಪೂರ್ಣವಧಿ ಅವಕಾಶ ನೀಡಿದ್ದರೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದರು. ಈ ಬಾರಿ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಹೀಗಾಗಿ ಅವರಿಗೆ ಇನ್ನಷ್ಟು ಬಲ ತುಂಬಬೇಕು ಎಂದು ಹೇಳಿದರು.

ಸದ್ಯ ಹಾಸನದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಕುಟುಂಬ ಪ್ರಚಾರಕಾರ್ಯ ಆರಂಭಿಸಿದ್ದಾರೆ. ಹೀಗಾಗಿ ಹಾಸನ ವಿಧಾನಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬ ಮಾತುಗಳು ಕ್ಷೇತ್ರದಾದ್ಯಂತ ಕೇಳಿ ಬರುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು