ಅರಸೀಕೆರೆ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಅನಗತ್ಯವಾಗಿ ವಿಳಂಬವಾಗದಂತೆ ನೋಡಿಕೊಳ್ಳಿ ಒಂದು ವೇಳೆ ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶಿವಲಿಂಗೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿಯ ಕಚೇರಿ ಆವರಣದಲ್ಲಿ ನಡೆದ ಟಾಸ್ ಸ್ಪೋರ್ಟ್ಸ್ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳ ಉದ್ದೇಶಿಸಿ ಮಾತನಾಡಿದ ಅವರು ಮಳೆ ಹಾನಿ ಪರಿಹಾರ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳು ಮಾಡಿಕೊಡುತ್ತಿಲ್ಲ ಎಂದು ಪ್ರತಿದಿನ ನೂರಾರು ಮಂದಿ ನಮ್ಮ ಮನೆ ಹಾಗೂ ಕಚೇರಿಗೆ ಬರುತ್ತಿದ್ದಾರೆ ಅಧಿಕಾರಿಗಳು ಏನು ಮಾಡುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುವಂತೆ ತಾಕಿತ್ತು ಮಾಡಿದರು.
ಕಳೆದ ವರ್ಷ ಸುರಿದ ಅತಿವೃಷ್ಟಿ ಮಳೆಯಿಂದ ಹಾನಿ ಅನುಭವಿಸಿರುವ ನಿರಾಶ್ರಿತರು ಸರ್ಕಾರದಿಂದ ದೊರೆಯುವ ಅನುದಾನಕ್ಕೆ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ ಏಕೆ ಅವರಿಗೆ ದೊರೆಯಬೇಕಾದ ಅನುದಾನ ಇನ್ನು ಕೈ ಸೇರಿಲ್ಲ ಎಂದು ತಹಸಿಲ್ದಾರ್ ವಿಭಾ ವಿದ್ಯ ರಾಥೋಡ್ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ಅವರನ್ನು ಶಾಸಕರು ಪ್ರಶ್ನಿಸಿದ್ದರು ಇದಕ್ಕೆ ತಹಸಿಲ್ದಾರ್ ಪ್ರತಿಕ್ರಿಯಿಸಿ ಮಳೆ ಹಾನಿಯಿಂದ ನಷ್ಟ ಅನುಭವಿಸಿರುವ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳಿಗೆ ಕಳಿಸಿಕೊಡಲಾಗಿದ್ದು ಅಂದಾಜು ನಷ್ಟ ೭೫ ಲಕ್ಷ ಈ ಪೈಕಿ ೨೭ ಲಕ್ಷದ ೭೫,೦೦೦ ಮಾತ್ರ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು ಪರಿಹಾರ ವಿಳಂಬ ಕುರಿತು ಅಸಮಾಧಾನ ಗೊಂಡ ಶಾಸಕ ಶಿವಲಿಂಗೇಗೌಡ ಈ ಸಂಬಂಧ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ನಿರಾಶ್ರಿತರಿಗೆ ದೊರೆಯಬೇಕಾಗಿರುವ ಪರಿಹಾರ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಕೂಡಲೇ ಪರಿಹಾರದ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ನಿರಾಶ್ರಿತರ ಮನೆ ನಿರ್ಮಾಣ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಮಾಹಿತಿ ಪಡೆದುಕೊಂಡ ಶಾಸಕರು ಕೆಲವು ಫಲಾನುಭವಿಗಳ ಮನೆ ನಿರ್ಮಾಣದ ಮೊದಲನೇ ಕಂತಿನ ಹಣ ಪಡೆದರು ಏಕೆ ಕಾಮಗಾರಿಯನ್ನು ಕೈಗೊಂಡಿಲ್ಲ ಎಂಬ ಕುರಿತು ಸ್ಥಳೀಯ ಪಿಡಿಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕಳಿಸಿ ಮಾಹಿತಿ ಪಡೆದು ಮನೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಾಪಂ ಕಾರ್ಯ ನಿರ್ವಾಹ ಅಧಿಕಾರಿ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮುಂಗಾರು ಮಳೆ ತಾಲೂಕಿನಲ್ಲಿ ಯಾವ ಪ್ರಮಾಣದಲಾಗಿದೆ ಹಾಗೂ ಮಳೆ ಬೆಳೆ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ನಾನಾ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.