ಅರಸೀಕೆರೆ: ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ತಾಲೂಕು ಮಟ್ಟದ ಸಭೆಗಳಿಗೆ ಬರುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಾಮರ್ಥ್ಯ ಎಷ್ಟು ಪ್ರಭಾವ ಬೀರುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ, ಹಾಸನ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಜೆಡಿಎಸ್ ಪಕ್ಷ ಬಹುಮತಗಳಿಸುವ ಮೂಲಕ ರಾಜ್ಯದ ಅಧಿಕಾರದ ಗದ್ದಿಗೆ ಹಿಡಿಯಲಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಜೆಡಿಎಸ್ ಮುಖಂಡ ರಾದ ಹೊಸೂರ್ ಗಂಗಾಧರ್ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವರಿಷ್ಠರು ಕೋಮುವಾದಿ ಬಿಜೆಪಿ ಪಕ್ಷವನ್ನು ದೂರ ಇಡಬೇಕು ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ, ಆದರೆ ಪರೋಕ್ಷವಾಗಿ ಜೆಡಿಎಸ್ ಪಕ್ಷ ಬಿಜೆಪಿ ಪಕ್ಷದ ಬಿ ಟೀಮ್ ಎಂದು ಪ್ರಚಾರ ಮಾಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಯಾವುದೇ ಭರವಸೆ ಗ್ಯಾರಂಟಿ ಕಾರ್ಡ್ ನೀಡಿದರು, ಒಂದು ಭರವಸೆ ಈಡೇರಿಸಲು ಸಾಧ್ಯವಿಲ್ಲ, ಈಗಲೇ ಬಿಜೆಪಿ ಸರ್ಕಾರ ವಿದ್ಯುತ್ ಇಲಾಖೆ ಯಲ್ಲಿ ೪೮ಸಾವಿರ ಕೋಟಿ ಸಾಲ ತೋರಿಸಿದೆ ಇಂತಹ ಸ್ಥಿತಿಯಲ್ಲಿ ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ಉಚಿತ ನೀಡಿದರೆ ಅದಕ್ಕೆ ೭೮ಸಾವಿರ ಕೋಟಿ ಹಣ ಬೇಕಾಗುತ್ತದೆ . ಒಟ್ಟು ೧೨ಸಾವಿರ ಕೋಟಿ ವಿದ್ಯುತ್ ನಿಗಮಗಳಿಗೆ ನಷ್ಟ ಉಂಟಾಗುತ್ತದೆ. ಕಾಂಗ್ರೆಸ್ ಪಕ್ಷದ ವರಿಷ್ಠರು ಸುಳ್ಳು ಭರವಸೆ ನೀಡಿದರೆ ಜನರು ನಂಬಿ ಮತ ಹಾಕಲು ಮೂರ್ಖರಲ್ಲ ಅವರಿಗೆ ಲೆಕ್ಕ ಬರುತ್ತದೆ, ಆದ್ದರಿಂದ ರಾಜ್ಯದಲ್ಲಿ ಗ್ಯಾರಂಟಿ ಕಾರ್ಡ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತವಾಗಿ ಪರಿವರ್ತನೆ ಹೊಂದುವುದು ಗ್ಯಾರಂಟಿ ಇಲ್ಲ ದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅರ್ಧ ಮುಳುಗಿದ ಹಡಗಂತಾಗಿದೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.ಮಾಜಿ ಶಾಸಕ ಕೆಎಂ ಶಿವಲಿಂಗೇಗೌಡ ಗಂಡಸಿ ಕ್ಷೇತ್ರದಲ್ಲಿ ೧೮ ಮತಗಳಿಂದ ಸೋತಾಗ ಅರಸೀಕೆರೆ ಕ್ಷೇತ್ರಕ್ಕೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿದ್ದು ಯಾರು ಸತತ ಮೂರು ಬಾರಿಗೆ ಆಯ್ಕೆಯಾಗಿ ದೇವೇಗೌಡರು ಅವರ ಕುಟುಂಬದ ಬೆಂಬಲದಿಂದಲೇ ಎನ್ನುವುದನ್ನು ಮರೆತಿದ್ದಾರೆ ಎಂದರು.
ಮುಖಂಡರಾದ ಹೊಸೂರು ಗಂಗಾಧರ್, ಬಾಣವರ ಅಶೋಕ್, ಪುರಸಭಾ ಮಾಜಿ ಅಧ್ಯಕ್ಷ ದೇವಕುಮಾರ್, ಬಿಜಿ ನಿರಂಜನ್, ಬಸವಲಿಂಗಪ್ಪ, ಕೆಂಕೆರೆ ಕೇಶವ ಮೂರ್ತಿ, ಅಮ್ಮನ ಹಟ್ಟಿ ಹರೀಶ್, ಹುಲ್ಲೇಕೆರೆ ಕುಮಾರ್, ಸೈಯದ್ ಸಿಕಂದರ್ ಇನ್ನಿತರರು ಹಾಜರಿದ್ದರು.