ಬೇಲೂರು: ಪ್ರವಾಸಿ ತಾಣ ಬೇಲೂರಿನ ಅಂದ-ಚೆಂದ ಹೆಚ್ಚಿಸುವ ನಿಟ್ಟಿನಲ್ಲಿ ಪುರಸಭೆ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಆದರೂ ಕೆಲವರು ಮಾತ್ರ ಎಲ್ಲೆಂದರಲ್ಲಿ ಕಸವನ್ನು ಹಾಕುವ ಮೂಲಕ ಪಟ್ಟಣದ ಅಸ್ವಚ್ಛತೆಗೆ ಕಾರಣವಾಗಿದ್ದಾರೆ. ಇಂತಹವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲು ಪುರಸಭೆ ಮುಂದಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕಿದರೆ ೫೦೦೦ ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಬೇಲೂರು ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಎಚ್ಚರಿಕೆ ನೀಡಿದರು.
ಪಟ್ಟಣ ಮೀನು ಮಾರುಕಟ್ಟೆ ಬಳಿ ನಾಮಫಲಕ ಅಳವಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿ-ಕೇಳಿ ಬೇಲೂರು ವಿಶ್ವ ಪ್ರವಾಸಿ ತಾಣ, ಇಲ್ಲಿನ ಶಿಲ್ಪಕಲಾ ವೈಭವನ್ನು ವೀಕ್ಷಿಸಲು ದಿನ ನಿತ್ಯ ಸಾವಿರಾರು ಪ್ರವಾಸಿಗರು ದೇಶ-ವಿದೇಶದಿಂದ ಬರುತ್ತಾರೆ. ಬರುವ ಪ್ರವಾಸಿಗರು ದೇಗುಲ ವೀಕ್ಷಣೆ ಬಳಿಕ ಪಟ್ಟಣದ ಸ್ವಚ್ಛತೆ ಗಮನಿಸುವ ನಿಟ್ಟಿನಲ್ಲಿ ಪಟ್ಟಣದ ೨೩ ವಾರ್ಡ್ಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಪ್ರತಿ ದಿನ ಪೌರಕಾರ್ಮಿಕರು ಸ್ವಚ್ಛತೆ ಮಾಡುವ ಜೊತೆಗೆ ಮನೆ-ಮನೆ ಪುರಸಭೆಯಿಂದ ಕಸದ ವಾಹನ ತೆರಳಿ ಕಸವನ್ನು ಪಡೆಯುತ್ತಾರೆ. ಅಲ್ಲಿಂದ ಪಟ್ಟಣ ಹೊರ ವಲಯದ ಘನತ್ಯಾಜ್ಯ ಘಟಕದಲ್ಲಿ ಕಸವನ್ನು ಬೇರ್ಪಡಿಸಿ ಹಸಿ ಕಸದಿಂದ ಸಾವಯವ ಗೊಬ್ಬರವನ್ನು ತಯಾರಿಸುವ ಮೂಲಕ ಇಡೀ ಜಿಲ್ಲೆಯಲ್ಲಿ ಬೇಲೂರು ಪುರಸಭೆ ಉತ್ತಮ ಹೆಸರನ್ನು ಪಡೆದಿದ್ದು ಸಾರ್ವಜನಿಕರು ಪುರಸಭಾ ಕಸ ವಿಲೇವಾರಿ ವಾಹನಕ್ಕೆ ಕಸವನ್ನು ಒಣ ಮತ್ತು ಹಸಿಕಸವಾಗಿ ಬೇರ್ಪಡಿಸಿ ನೀಡಬೇಕಿದೆ ಎಂದು ಮನವಿ ಮಾಡಿದರು.
ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿದರೂ ಕೂಡ ಕೆಲವರು ಮಾತ್ರ ರಾತ್ರೋರಾತ್ರಿ ಮೂಟೆಗಳಲ್ಲಿ ತ್ಯಾಜ್ಯವನ್ನು ಕಟ್ಟಿ ರಸ್ತೆ ಬದಿಗೆ ಎಸೆಯುವ ಮೂಲಕ ಪಟ್ಟಣದ ಅಸ್ವಚ್ಛತೆಗೆ ಕಾರಣವಾಗಿದ್ದಾರೆ. ಈ ಬಗ್ಗೆ ಹತ್ತಾರು ಭಾರಿ ತಿಳಿಸಿದರೂ ಮತ್ತು ಜಾಗೃತಿ ಮೂಡಿಸಿರೂ ಎಲ್ಲೆಂದರಲ್ಲಿ ಕಸ ಹಾಕುವ ಪರಿಪಾಠ ನಿಂತಿಲ್ಲ, ಈ ಸಂಬಂಧ ಪುರಸಭೆ ಇನ್ನು ಮುಂದೆ ಸ್ವಚ್ಛತೆಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು ಎಲ್ಲೆಂದರಲ್ಲಿ ಕಸವನ್ನು ಹಾಕಿದವರ ವಿರುದ್ದ ಕ್ರಮ ಕೈಗೊಳ್ಳಲು ಮತ್ತು ಅಂತವರ ಮೇಲೆ ರೂ ೫೦೦೦ ದಂಡ ವಿಧಿಸಲು ನಿರ್ಧರಿಸದ ನಾಮಫಲಕವನ್ನು ಅಳವಡಿಸಲಾಗಿದೆ. ಈಗಾಗಲೇ ಪಟ್ಟಣದ ಗೊಟ್ರವಳ್ಳಿ, ನೆಹರುನಗರದ ಯಗಚಿ ನಾಲೆ, ಮೀನು ಮಾರುಕಟ್ಟೆ, ಕುಂಭಾರ ಬೀದಿ ನಾಲ್ಕು ಕಡೆ ಸಿಸಿ ಟಿವಿಗಳನ್ನು ಅಳವ ಡಿಸಲಾಗಿದೆ. ಕಸವನ್ನು ಎಸೆಯುವ ವ್ಯಕ್ತಿಯ ಹೆಸರನ್ನು ಪುರಸಭೆಗೆ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿ ಇಟ್ಟು ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಅಕ್ರಮಪಾಷ, ಸೌಮ್ಯ ಮತ್ತು ಆರೋಗ್ಯ ನಿರೀಕ್ಷರಾದ ಜ್ಯೋತಿ ಇನ್ನು ಮುಂತಾದವರು ಹಾಜರಿದ್ದರು.