ಎಚ್.ಡಿ.ಕೋಟೆ: ನೆರೆ ರಾಜ್ಯ ತಮಿಳುನಾಡಿನ ಒತ್ತಡದ ಮುಲಾಜಿಗೆ ಮಣಿಯದೆ ಕಾವೇರಿ ಅಂತಿಮ ತೀರ್ಪಿನಲ್ಲಿ ಸೂಚಿಸಿರುವಂತೆ ರಾಜ್ಯ ಸರ್ಕಾರ ಕೂಡಲೇ ಮೇಕೆದಾಟು ಯೋಜನೆ ಕೈಗೆತ್ತಿಕೊಂಡು ಸಮುದ್ರಕ್ಕೆ ಹರಿಯುವ ಹೆಚ್ಚುವರಿ ಕಾವೇರಿ ನೀರನ್ನು ರಾಜ್ಯದ ಹಿತ ಶಕ್ತಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಆಗ್ರಹಿಸಿದ್ದಾರೆ.
ಕಬಿನಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ರೈತ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಕಬಿನಿ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಎರಡನೇ ಹಂತದ ಯೋಜನೆ ಹಾಗೂ ಏತ ನೀರಾವರಿ ಯೋಜನೆಗಳನ್ನು ಶರವೇಗದಲ್ಲಿ ಕಾರ್ಯಗತಗೊಳಿಸಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಕುರಿತ ಸಚಿವರ ಮಾತು ಸರಿಯಲ್ಲ. ಗೋವುಗಳ ವಿಷಯದಲ್ಲಿ ಸರ್ಕಾರವಾಗಲಿ ಸಚಿವರಾಗಲಿ ಗೋವುಗಳ ವಿಷಯವನ್ನು ರಾಜಕಾರಣಕ್ಕೆ ಎಳೆದು ತರಬಾರದು ಪಶು ಸಂಗೋಪನ ಸಚಿವರು ಕೋಣನಿಗೂ ಹಸುವಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ. ಹಸುಗಳು ರೈತರ ಬದುಕಿಗೆ ಆಸರೆಯಾಗಿ ಕಾಯಕ ಮಾಡುತ್ತವೆ ನಾವು ಗೌರವ ಭಾವನೆಯಿಂದ ಪೂಜಿಸುತ್ತೇವೆ ಇಂಥ ಪ್ರಾಣಿಗಳನ್ನು ಹತ್ಯೆ ಮಾಡಿದರೆ ಏನು ತಪ್ಪು ಎಂದು ಹೇಳುವುದು ಒಪ್ಪುವಂತದ್ದಲ್ಲ, ಕಾನೂನಿನಲ್ಲಿರುವ ಅಡೆ ತಡೆಗಳನ್ನು ನಿವಾರಿಸಿ ತಪ್ಪೇನಿಲ್ಲ. ಆದರೆ ಮೇಲಿನಂಥ ಇಂಥ ಹೇಳಿಕೆ ಸಚಿವರಿಗೆ ಶೋಭೆ ತರುವುದಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳ ನಿರಂತರ ದಾಳಿ ಮತ್ತು ಹಾವಳಿಯಿಂದ ಕಾಡಂಚಿನ ಭಾಗದ ರೈತರು ತಮ್ಮ ಬದುಕು ಭಯದಿಂದ ದೂಡು ತ್ತಿದ್ದಾರೆ, ಕಾಡಿನ ಒಳಗೆ ಇರುವ ಎಲ್ಲಾ ಖಾಸಗಿ ರೆಸಾರ್ಟ್ ಇನ್ನಿತರ ಮೋಜಿನ ತಾಣಗಳನ್ನು ಬಂದ್ ಮಾಡಲು ಗಣಿಗಾರಿಕೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಂದು ಹಕ್ಕೊತ್ತಾಯ ಮಂಡಿಸಿದ ರೈತ ಮುಖಂಡರು ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೋರಾಟಗಾರರಿಗೆ ನ್ಯಾಯ ಕೊಡಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಸಭೆಯಲ್ಲಿ ಅತ್ತಹಳ್ಳಿ ದೇವರಾಜ್, ಪಿ ಸೋಮಶೇಖರ್, ಕೆಂಡಗಣ್ಣ ಸ್ವಾಮಿ, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಬಿದರಹಳ್ಳಿ ಮಹೇಶ್, ಮಹಿಳಾ ಜಿಲ್ಲಾಧ್ಯಕ್ಷೆ ಕಮಲಮ್ಮ, ಲಕ್ಷ್ಮಿಪುರ ವೆಂಕಟೇಶ್, ಸಿದ್ದೇಶ್, ಹಂಪಾಪುರ ರಾಜೇಶ್ ಗೌರಿಶಂಕರ್ ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ, ಹೆಗ್ಗೂರು ರಂಗರಾಜ್, ಕಾಟೂರು ಮಹಾದೇವಸ್ವಾಮಿ, ಕೋಟೆ ಸುರೇಶ್ ಶೆಟ್ಟಿ, ಸುನಿಲ್ ಕುಮಾರ್, ಅಂಬಳೆ ಮಂಜುನಾಥ್, ಎಗ್ಗೊಟಾರ ಶಿವ ಸ್ವಾಮಿ, ವಾಜಮಂಗಲ ಮಹದೇವು, ನಂಜುಂಡಸ್ವಾಮಿ, ಸಿದ್ದರಾಮ, ರಾಜೇಶ್, ಕರುವಟ್ಟಿ ಉಮೇಶ್ ಇನ್ನಿತರರು ಇದ್ದರು.