ಹಾಸನ : ಮಳೆ, ಸಿಡಿಲು ಪ್ರವಾಹದಿಂದ ಹೆಚ್ಚಿನ ಪ್ರಾಣ ಹಾನಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಸೂಚನೆ ನೀಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಮುಂ ಗಾರು ಪೂರ್ವ ಸಿದ್ಧತೆ ಕುರಿತು ಇಂದು ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಮುಂಗಾರು ಮಳೆಯಿಂದ ಯಾವುದೇ ಹಾನಿ ಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಿದರು.
ಮಾಧ್ಯಮಗಳಲ್ಲಿ ಸಿಡಿಲು ಆಪ್ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಜನರಲ್ಲಿ ಕಾಲ ಕಾಲಕ್ಕೆ ಎಚ್ಚರಿಕೆ ಮಾಹಿತಿ ಪ್ರಚಾರ ಪ್ರಸಾರ ಮಾಡುವಂತೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದರು. ಸೈಕ್ಲೋನ್ ನಿಂದ ತೊಂದರೆ ಎದುರಿಸಬಹುದಾದ ಜಿಲ್ಲೆಗಳಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಅವರು ಹೇಳಿದರು. ಮಳೆಯಿಂದ ಉಂಟಾಗುವ ಜೀವ ಹಾನಿ ಹಾಗೂ ಮನೆ ಹಾನಿಗೆ ಸಕಾಲದಲ್ಲಿ ಪರಿಹಾರ ವಿತರಿಸಲು ಹಾನಿ ಬಗ್ಗೆ ಜಂಟಿ ಸಮೀಕ್ಷೆ ಮಾಡಿ ವರದಿ ಮಾಡುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಅವರು ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಹಾಗೂ ಎಲ್ಲಾ ತಾಲ್ಲೂಕುಗಳಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ ಸಭೆ ನಡೆಸಲಾ ಗುತ್ತಿದೆ ಎಂದರು. ಜಿಲ್ಲಾ ಹಂತದಲ್ಲಿ ಹಾಗೂ ಪ್ರತಿ ತಾಲ್ಲೂಕುಗಳ ಲ್ಲಿಯೂ ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯಲಾಗಿದೆ ಸರಿಯಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಪರಿಶೀಲನೆ ಸಹ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅತೀವೃಷ್ಠಿ ನಿರ್ವಹಣೆಗಾಗಿ ಅಗ್ನಿ ಶಾಮಕ ಹಾಗೂ ಪೊಲೀಸ್ ಇಲಾಖೆಯಲ್ಲಿ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲು ತಿಳಿಸಲಾಗಿದೆ. ಅಗ್ನಿಶಾ ಮಕ ಇಲಾಖೆಯವರಿಗೆ ಅಗತ್ಯವಿ ರುವ ಉಪಕರಣಗಳನ್ನು ನೀಡಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು.
ಕಳೆದ ಬಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಒಂದು ಸ್ಥಳದಲ್ಲಿ ಭೂ ಕುಸಿತ ಉಂಟಾಗಿದ್ದು, ಆ ಪ್ರದೇಶದಲ್ಲಿ ಮುನ್ನೆಚ್ಚರಿಕೆಯಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಭೂ ಕುಸಿತದ ಬಗ್ಗೆ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದ್ದು, ಯಾವುದೇ ರೀತಿಯ ಅವಘಡ ಸಂಭವಿಸಿದರೆ ಮಾಹಿತಿ ನೀಡಲು ಸ್ಥಳೀಯವಾಗಿ ಪ್ರತಿನಿಧಿಗಳನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಮೊಬೈಲ್ ವಾಹನಗಳನ್ನು ನಿಯೋಜಿಸಲು ಸೂಚಿಸಲಾಗಿದೆ, ರಸ್ತೆ ಬದಿಯಲ್ಲಿರುವ ಯಾವುದಾದರೂ ಹಾನಿಯಾಗುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಅವರು ತಿಳಿಸಿದರು.
ಎಲ್ಲಾ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ. ಆರೋಗ್ಯ ಹಾಗೂ ಚೆಸ್ಕಾಂ ಇಲಾಖೆಗಳೊಂದಿಗೆ ಸಭೆ ನಡೆಸಿ ತುರ್ತಾಗಿ ಅವಶ್ಯಕತೆ ಇರುವ ಔಷಧಿ ಮತ್ತು ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಲು ತಿಳಿಸಲಾಗಿದೆ ಎಂದರು.
ವಿಡಿಯೋ ಸಂವಾದಲ್ಲಿ ಅಪರ ಜಿಲ್ಲಾಧಿಕಾರಿ ಆನಂದ್, ಉಪ ವಿಭಾಗ ಅಧಿಕಾರಿಗಳಾದ ಅನ್ಮೊಲ್ ಜೈನ್, ಮೊಹಮ್ಮದ್ ನಸೀಮ್ , ನಗರಾಭಿವೃದ್ದಿ ಕೋಶ ದ ಯೋಜನಾ ನಿರ್ದೇಶಕರಾದ ಬಿ ಎ ಜಗದೀಶ್ ಹಾಗೂ ಎಲ್ಲಾ ತಹಸೀಲ್ದಾರ್ ಭಾಗವಹಿದ್ದರು.