ಹೊಳೆನರಸೀಪುರ: ಸಮಗ್ರ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಅಭಿವೃದ್ದಿ ಮಾಡಿದ್ದೇನೆ. ರಸ್ತೆಗಳು, ಗ್ರಾಮೀಣ ಭಾಗದ ಕುಡಿಯುವ ನೀರು ಹಾಗೂ ನಾಲಾ ಅಭಿವೃದ್ದಿ ನಡೆಸಿದ್ದು, 50 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ನಿಶ್ಚಿತ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ನಿವಾಸದಲ್ಲಿ ಪತ್ರಿಕಾಗೋಷಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಅಭಿವೃದ್ಧಿ ಕುರಿತು ವಿವರಿಸುತ್ತಾ ಹೇಮಾವತಿ ನಾಲೆಗಳ ಅಭಿವೃದ್ದಿಯಿಂದ ಹಳ್ಳಿಮೈಸೂರು ಹೋಬಳಿ, ಕೆ.ಆರ್.ನಗರ, ಕೆ.ಆರ್.ಪೇಟೆ ವರೆಗೂ ಸರಾಗವಾಗಿ ನೀರು ಹರಿಯುವಂತೆ ಕಾಮಗಾರಿ ನಡೆಸಲಾಗಿದೆ.
ಏತನೀರಾವರಿ ಪುನಶ್ಚೇತನಕ್ಕೂ ವೆಚ್ಚ ಮಾಡಿದ್ದೇವೆ. ಶಾಲಾ, ಕಾಲೇಜು, ವಸತಿ ಶಾಲೆಗಳು, ಆಸ್ಪತ್ರೆ ಉನ್ನತೀಕರಣ ವಿಚಾರದಲ್ಲಿ ರಾಜ್ಯದಲ್ಲೇ ತಾಲೂಕು ಹಂತದಲ್ಲಿ ಹೊಳೆನರಸೀಪುರ ನಂ 1 ಎಂದು ಹೇಳಿದರು.
’ದೊಡ್ಡಬ್ಯಾಗತವಳ್ಳಿ ಗ್ರಾಮ ಸಮೀಪ ಕೈಗಾರಿಕೆ ಸ್ಥಾಪನೆಗೆ ಭೂಮಿ ಕಾಯ್ದಿರಿಸಲಾಗಿದೆ. ಸಕ್ಕರೆ ಕಾರ್ಖಾನೆ ಹಾಗೂ ಡಿಸ್ಟಿಲರಿ ಫ್ಯಾಕ್ಟರಿಗಳ ಸ್ಥಾಪನೆಗೆ ಮುಂದಿನ ತಿಂಗಳಿಂದ ಕಾಮಗಾರಿ ಆರಂಭವಾಗಲಿದೆ. ಹಾಸನ ಮೈಸೂರು ನಡುವೆ ಚತುಷ್ಪತ ರಸ್ತೆಗೆ ಹಣ ಕಾಯ್ದಿರಿಸಲಾಗಿದೆ. ಹಾಸನ, ಬೇಲೂರು, ಚಿಕ್ಕಮಗಳೂರು ನಡುವಿನ ರೈಲು ಸಂಚಾರಕ್ಕೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಿದ್ದೇನೆ.’