ಮಡಿಕೇರಿ: ರೋಗಿಯಿಂದ ಲಂಚಕ್ಕೆ ಬೇಡಿಕೆ ಇಟ್ಟು ಎ.ಸಿ.ಬಿ ದಾಳಿ ಸಂದರ್ಭ ಸಿಕ್ಕಿ ಬಿದ್ದಿದ್ದ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ವಿಶ್ವನಾಥ ಸಿಂಪಿ ಅವರನ್ನು ಅಮಾನತು ಮಾಡಿ ಸರಕಾರ ಆದೇಶ ಹೊರಡಿಸಿದೆ.
ಕಳೆದ ಸಾಲಿನ ಡಿಸೆಂಬರ್ 9 ರಂದು ರೋಗಿಯೊಬ್ಬರ ಸಂಬಂಧಿಯಿಂದ 2 ಸಾವಿರ ರೂ ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಪೊಲೀಸರಿಗೆ ಸಿಂಪಿ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಎಸಿಬಿ ದಾಳಿ ಸಂದರ್ಭ ಸಿಕ್ಕಿಬಿದ್ದಿದ್ದ ಡಾ.ವಿಶ್ವನಾಥ್ ಸಿಂಪಿ, ಡಿ. 9 ರಿಂದ 23 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ಆರೋಪಿಯನ್ನು ವೀರಾಜಪೇಟೆಯಲ್ಲಿಯೇ ಕರ್ತವ್ಯದಲ್ಲಿ ಮುಂದುವರೆಸಿದರೆ ಸಾಕ್ಷ್ಯನಾಶ ಮತ್ತು ಸಾಕ್ಷಿಗೆ ಬೆದರಿಕೆ ಹಾಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿಯವರು, ಲೀನ್ ವ್ಯವಸ್ಥೆಯಡಿ ಚಿಕ್ಕೋಡಿ ತಾಲೂಕಿನ ಎಕ್ಸಂಬ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಜನರಲ್ ಸರ್ಜನ್ ಹುದ್ದೆಗೆ ನಿಯೋಜಿಸಿದ್ದಾರೆ.