News Kannada
Sunday, March 26 2023

ಮಡಿಕೇರಿ

ಅಧಿಕಾರಿಗಳ ಯಡವಟ್ಟು: ಮಡಿಕೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ರದ್ದು

Photo Credit :

ಮಡಿಕೇರಿ: ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಮಡಿಕೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಅಪರಾಹ್ನ ನಡೆಯಬೇಕಿದ್ದ ಚುನಾವಣೆ ರದ್ದಾದ ಘಟನೆ ನಡೆದಿದೆ. ಅಧಿಕಾರಿಗಳ ಈ ನಡೆ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಸೋಮವಾರ ಅಪರಾಹ್ನ ನಗರಸಭಾ ಅಧ್ಯಕ್ಷರಾಗಿ ಬಿಜೆಪಿಯ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷರಾಗಿ ಸವಿತಾ ರಾಕೇಶ್ ಅಧಿಕಾರ ಸ್ವೀಕರಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿನಿಂದಾಗಿ ಇಡೀ ಚುನಾವಣಾ ಪ್ರಕ್ರಿಯೆಯೇ ರದ್ದುಗೊಳ್ಳುವಂತಾಗಿದೆ.

ಮಡಿಕೇರಿ ನಗರಸಭೆಗೆ ಕಳೆದ ಎರಡು ವರ್ಷಗಳಿಂದ ಚುನಾಯಿತ ಆಡಳಿತ ಮಂಡಳಿ ಇಲ್ಲದೆ ಅಧಿಕಾರಿಗಳ ದರ್ಬಾರು ನಡೆಯುತ್ತಿತ್ತು. ನಗರಸಭೆಗೆ ಚುನಾವಣೆ ನಡೆದಿದ್ದರೂ, ಮೀಸಲಾತಿ ಗೊಂದಲ ಹಾಗೂ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ಸರಕಾರ ತಡೆಹಿಡಿದಿತ್ತು.

ಕಳೆದ ತಿಂಗಳು ಕೊನೆಗೂ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿಯನ್ನು ಸರಕಾರ ಪ್ರಕಟಿಸಿದ್ದು, ಅದರಂತೆ ಮಡಿಕೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ಗೊತ್ತುಪಡಿಸಿ ಮಡಿಕೇರಿ ಉಪ ವಿಭಾಗಾಧಿಕಾರಿ ಈಶ್ವರಕುಮಾರ್ ಖಂಡು ಅವರು ವೇಳಾಪಟ್ಟಿ ಪ್ರಕಟಿಸಿದ್ದರು.

ಅದರಂತೆ ಸೋಮವಾರ ಪೂರ್ವಾಹ್ನ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಕ್ರಮವಾಗಿ ಬಿಜೆಪಿಯ ಅನಿತಾ ಪೂವಯ್ಯ ಹಾಗೂ ಸವಿತಾ ರಾಕೇಶ್ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ)ದಿಂದ ಮೇರಿ ವೇಗಸ್ ಮತ್ತು ನೀಮಾ ಅರ್ಶದ್ ನಾಮಪತ್ರವನ್ನೂ ಸಲ್ಲಿಸಿದ್ದರು.

ನಗರಸಭೆಯಲ್ಲಿ ಬಿಜೆಪಿ 16, ಎಸ್‌ಡಿಪಿಐ 5, ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಸಂಖ್ಯಾ ಬಲವನ್ನು ಹೊಂದಿದ್ದು, ಇದರೊಂದಿಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರು ಮತದಾನದ ಹಕ್ಕು ಪಡೆದಿದ್ದರು. ಅಧಿಕಾರ ಬಿಜೆಪಿ ಪಾಲಾಗುವುದು ನಿಶ್ಚಿತವಾಗಿದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐ ನ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣೆ ನಡೆಸುವುದು ಅನಿವಾರ್ಯವಾಯಿತು.

ಚುನಾವಣಾಧಿಕಾರಿ ಘೋಷಣೆ: ಮೊದಲೇ ನಿಗದಿಯಾಗಿದ್ದಂತೆ ಮಧ್ಯಾಹ್ನ 2 ಗಂಟೆಗೆ ಚುನಾವಣಾ ಪ್ರಕ್ರಿಯೆ ನಡೆಯುವ ಸಲುವಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸದಸ್ಯರು ಸಭೆಗೆ ಆಗಮಿಸಿದ್ದರು.

ಆದರೆ ಸಭೆಯ ಆರಂಭದಲ್ಲಿ ಮಾತನಾಡಿದ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರು, ಇಂದಿನ ಚುನಾವಣೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ಜಾರಿಯಾಗಿಲ್ಲ. ಇದಕ್ಕೆ ತಾಂತ್ರಿಕ ದೋಷ ಕಾರಣವಾಗಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆಯಂತೆ ಇಂದು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಾಧ್ಯವಿಲ್ಲ ಎಂದು ಘೋಷಿಸಿ, ಚುನಾವಣೆ ಮುಂದೂಡಿದರು.

ಇದಕ್ಕೆ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣ ಸೇರಿದಂತೆ ಬಿಜೆಪಿಯ ಎಲ್ಲಾ 16 ಮಂದಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ತಪ್ಪಿಗೆ ತೇಪೆ ಹಚ್ಚಲು ಚುನಾವಣೆ ಮುಂದೂಡುವುದು ಸರಿಯಲ್ಲ. ಬಿಜೆಪಿಗೆ ಸಂಸದರು, ಇಬ್ಬರು ಶಾಸಕರ ಸಹಿತ 19 ಸ್ಪಷ್ಟ ಬಹುಮತವಿದೆ. ಈ ಕ್ಷಣವೇ ಚುನಾವಣೆ ನಡೆಸಬೇಕು ಎಂದು ಪಟ್ಟು ಹಿಡಿದರು.

See also  ಮಂತ್ರಿಗಿರಿ ಕೈತಪ್ಪಿದರೂ ಪಕ್ಷಕ್ಕೆ ನಿಷ್ಠ

ಈ ಸಂದರ್ಭ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ, ವಿಧಾನ ಪರಿಷತ್ ಸದಸ್ಯರು ಕೂಡ ನಗರಸಭೆ ಮತದಾರರಾಗಿದ್ದಾರೆ. ಅವರಿಗೆ ನೋಟೀಸ್ ತಲುಪಿಸದೇ ಚುನಾವಣೆ ನಡೆಸುವುದು ಕಾನೂನು ಬಾಹಿರವಾಗಲಿದೆ. ಹೀಗಾಗಿ ಚುನಾವಣೆ ಮುಂದೂಡಬೇಕು ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಎಸ್‌ಡಿಪಿಐ ಸದಸ್ಯರು, ಬಿಜೆಪಿಯ ಒತ್ತಡಕ್ಕೆ ಮಣಿದು ಒಮ್ಮೆ ಮುಂದೂಡಿದ ಚುನಾವಣೆ ಪ್ರಕ್ರಿಯೆಯನ್ನು ರದ್ದು ಮಾಡುವಂತಿಲ್ಲ. ಹೀಗೆ ಮಾಡಿದಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಲಿದೆ ಎಂದು ಹೇಳಿದರು. ಈ ಸಂದರ್ಭ ಸಭೆಯಲ್ಲಿ ತೀವ್ರ ಗದ್ದಲ ಏರ್ಪಟ್ಟಿತು.

ಪೊಲೀಸರು ಪ್ರವೇಶಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪೊಲೀಸರು ಸಭೆಯಿಂದ ಹೊರ ಹೋಗಬೇಕು. ಇದು ಚುನಾವಣಾ ಪ್ರಕ್ರಿಯೆ ಆಗಿರುವ ಕಾರಣ ಪೊಲೀಸರು ಪ್ರವೇಶಿಸುವಂತಿಲ್ಲ ಎಂದು ಅಸಮಾಧಾನ ಹೊರಗೆಡವಿದರು. ಬಳಿಕ ಪೊಲೀಸರು ಸಭೆಯಿಂದ ಹೊರ ತೆರಳಿದರು.

ಈ ಸಂದರ್ಭ ಚುನಾವಣಾಧಿಕಾರಿ ಈಶ್ವರ್ ಕುಮಾರ್ ಅವರು, ನಮ್ಮ ಕಡೆಯಿಂದ ತಪ್ಪಾಗಿದೆ. ಆದರೆ ನೋಟೀಸ್ ಜಾರಿಯಾಗದೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೂ ವರದಿ ನೀಡಲಾಗುತ್ತದೆ. ಹೀಗಾಗಿ ಇಂದಿನ ಚುನಾವಣೆ ಮುಂದೂಡುವುದಾಗಿ ಘೋಷಿಸಿ ಸಭೆಯಿಂದ ಹೊರ ನಡೆದರು.

ಚುನಾವಣಾಧಿಕಾರಿ ಸಭೆಯಿಂದ ಹೊರ ನಡೆಯುತ್ತಿದ್ದಂತೆಯೇ ಅವರ ವಿರುದ್ದ ಬಿಜೆಪಿ ಸದಸ್ಯರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ತಪ್ಪಿಗೆ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯರಿಗೆ ನೋಟೀಸ್ ಜಾರಿಯಾಗದಿರುವುದಕ್ಕೆ ಚುನಾವಣಾ ಅಧಿಕಾರಿಗಳು ಕಾರಣ. ಅದು ಅವರ ತಪ್ಪು. ಏಕಾಏಕಿ ಚುನಾವಣೆ ರದ್ದು ಮಾಡಲು ಕಾನೂನಲ್ಲಿ ಅವಕಾಶ ಎಲ್ಲಿದೆ. ಅವರ ತಪ್ಪಿಗೆ ಇಡೀ ಚುನಾವಣೆಯನ್ನು ಮುಂದೂಡಿರುವುದು ನ್ಯಾಯ ಸಮ್ಮತವಲ್ಲ. ಚುನಾವಣಾಧಿಕಾರಿಗಳು ನಡೆದುಕೊಂಡ ರೀತಿಯೂ ಸರಿಯಲ್ಲ. ಬಿಜೆಪಿಗೆ 19 ಮತಗಳ ಬಲವಿದೆ. ವಿಪಕ್ಷಗಳಿಗೆ ಕೇವಲ 8 ಮತ ಇದೆ. ಈ ನಡೆಯನ್ನು ಬಿಜೆಪಿ ತೀವ್ರ ವಿರೋಧಿಸುತ್ತದೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗುತ್ತದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್‌ಸಿಂಹ ಹೇಳಿದರು.

ನೋಟೀಸ್ ನೀಡದಿರುವುದು ಅಧಿಕಾರಿಗಳ ತಪ್ಪು. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಚುನಾವಣಾ ಪ್ರಕ್ರಿಯೆ ಮುಂದೂಡಿರುವುದು ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾನೂನು ಹೋರಾಟದ ಕುರಿತು ಪಕ್ಷ ನಿರ್ಧಾರದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಗುಡುಗಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು