ಮಡಿಕೇರಿ ಡಿ.22 : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಜ.3 ಮತ್ತು 4 ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಜ.3 ರಂದು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದ್ದು, ಆಸಕ್ತ ಸರ್ಕಾರಿ ಖಾಯಂ ನೌಕರರು ಡಿ.27 ರೊಳಗೆ http://fr.l/TnDT1Hdr7 ಲಿಂಕ್ ಬಳಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಡಿ.3 ರಂದು ಬೆಳಗ್ಗೆ 10.30 ಗಂಟೆಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಶಾಸಕ ಕೆ.ಜಿ.ಬೋಪಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ವಿಧಾನಸಭಾ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಬೋಜೇಗೌಡ, ಆಯನೂರು ಮಂಜುನಾಥ್, ಕರ್ನಾಟಕ ರಾಜ್ಯ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ಎಂ.ರವಿ ಕಾಳಪ್ಪ, ಜಿಲ್ಲಾಧಿಕಾರಿ ಬಿ.ಸಿ.ಸತೀಶ, ಜಿ.ಪಂ ಸಿಇಓ ಡಾ.ಎಸ್.ಆಕಾಶ್, ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ.ಅಯ್ಯಪ್ಪ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
35 ವರ್ಷದೊಳಗಿನ ಮಹಿಳೆಯರ ವಿಭಾಗಕ್ಕೆ ವಾಲಿಬಾಲ್, ಫುಟ್ಬಾಲ್, ಹಾಕಿ, ಕಬ್ಬಡಿ, ಕ್ರಿಕೆಟ್, ಚೆಸ್, ಟೇಬಲ್ ಟೆನ್ನಿಸ್, ಕೇರಂ, ವಿವಿಧ ತೂಕದ ಅನುಸಾರ ವೈಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ದೇಹಧಾಡ್ರ್ಯ ಸ್ಪರ್ಧೆ ನಡೆಯಲಿದೆ. 35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವಿವಿಧ ಹಂತದ ಓಟ, ಉದ್ದಜಿಗಿತ, ಎತ್ತರ ಜಿಗಿತ ಸೇರಿದಂತೆ ವಿವಿಧ ಕ್ರೀಡಾಕೂಟ ನಡೆಯಲಿದೆ.
40 ವರ್ಷದೊಳಗಿನ ಪುರುಷರಿಗೆ ವಿವಿಧ ಹಂತದ ಓಟ, ಉದ್ದಜಿಗಿತ, ಎತ್ತರ ಜಿಗಿತ, ಭಾರದ ಗುಂಡು ಎಸೆತ, ಡಿಸ್ಕಸ್ ಥ್ರೋ, ಹ್ಯಾಮರ್ ಥ್ರೋ, ರಿಲೇ, ಜಾವ್ಲಿನ್ ಥ್ರೋ, 35 ರಿಂದ 45 ವಯೋಮಾನದ ಮಹಿಳೆಯರಿಗೆ ಓಟ, ಉದ್ದ ಹಾಗೂ ಎತ್ತರ ಜಿಗಿತ, ಗುಂಡು, ಡಿಸ್ಕಸ್ ಎಸೆತ, ಟೆನಿಕಾಯ್ಟ ಪಂದ್ಯ ನಡೆಯಲಿದೆ. ಇದೇ ರೀತಿ 40-50 ರ ಪುರುಷರ ವಿಭಾಗ, 35-40 ಮಹಿಳೆಯರ ವಿಭಾಗ, 50-60 ವರ್ಷ ಮೇಲ್ಪಟ್ಟ ಪುರುಷರ ವಿಭಾಗ, 45-60 ಮೇಲ್ಪಟ್ಟ ಮಹಿಳೆಯ ವಿಭಾಗದಲ್ಲಿ ಓಟ, ಲಾಂಗ್ ಜಂಪ್, ಭಾರದ ಗುಂಡು ಎಸೆತ ಇತ್ಯಾದಿ ಕ್ರೀಡೆ ನಡೆಯಲಿದೆ ಎಂದು ವಿವರಿಸಿದರು.
ಹಿಂದೂಸ್ಥಾನಿ ಸಂಗೀತ ಮೌಖಿಕ(ಕ್ಲಾಸಿಕಲ್), ಲಘು ಶಾಸ್ತ್ರೀಯ ಸಂಗೀತ, ವಿವಿಧ ನಾಟ್ಯ ಪ್ರಾಕರ, ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ, ನಾಟಕ ಸೇರಿದಂತೆ ಕಥಕ್, ಮಣಿಪುರಿ, ಕೂಚುಪುಡಿ, ಕಥಕಳಿ, ಭರತನಾಟ್ಯ ನೃತ್ಯ ಸ್ಪರ್ಧೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.
ಸ್ಪರ್ಧಿಗಳು ಖಾಯಂ ಸರ್ಕಾರಿ ನೌಕರರಾಗಿರಬೇಕು. ದೈಹಿಕ ಶಿಕ್ಷಕರು, ಕ್ರೀಡಾ ಇಲಾಖೆ ತರಬೇತುದಾರರು ಭಾಗವಹಿಸುವಂತಿಲ್ಲ. ಒಬ್ಬ ಸ್ಪರ್ಧಿ ಅಥ್ಲೆಟಿಕ್ಸ್ನ ಮೂರು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9448504636 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಸಿ.ಅರುಣ್ ಕುಮಾರ್, ಗೌರವಾಧ್ಯಕ್ಷ ಎಸ್.ಟಿ.ಶಮ್ಮಿ, ಹಿರಿಯ ಉಪಾಧ್ಯಕ್ಷ ಬಿ.ಎಸ್.ಗುರುರಾಜ್, ಕ್ರೀಡಾ ಕಾರ್ಯದರ್ಶಿ ಬಿ.ಎಲ್.ಸಂದೇಶ್, ನಿರ್ದೇಶಕ ಕೆ.ಆರ್. ನವೀನ್ ಕುಮಾರ್ ಉಪಸ್ಥಿತರಿದ್ದರು.