ವಿರಾಜಪೇಟೆ: ಈ ಬಾರಿಯ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ನಂತರ ಇಂದು ಗೋಣಿಕೊಪ್ಪಲಿನ ರಾಧಾ ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಆತ್ಮವಲೋಕನ ಸಭೆ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಜರುಗಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಕೆ ಜಿ ಬೋಪಯ್ಯ, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಮಾಜಿ ಜಿಲ್ಲಾಧ್ಯಕ್ಷ ಹಾಗೂ ಈ ಬಾರಿಯ ಚುನಾವಣಾ ಉಸ್ತುವಾರಿ ರವೀಂದ್ರ, ಅಕ್ರಮ ಸಕ್ರಮ ಮಾಜಿ ಅಧ್ಯಕ್ಷ ಗಿರೀಶ್ ಗಣಪತಿ, ತಾಲೂಕು ಮಹಿಳಾ ಅಧ್ಯಕ್ಷರು, ಎಸ್ ಟಿ ಅಧ್ಯಕ್ಷರು, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆ ಆರಂಭಗೊಳ್ಳುತಿದ್ದಂತೆ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿತು. ಸೋಲಿಗೆ ಕಾರಣದ ಬಗೆ ಹಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು, ಅಡ್ಡಂಡ ಕಾರ್ಯಪ್ಪ ಭಾಷಣ, ಕಾರ್ಯಕರ್ತರಲ್ಲಿ ಹೊಂದಾಣಿಕೆ ಕೊರತೆ, ಕೆಲವು ಮುಖಂಡರ ತಟಸ್ಥ ಧೋರಣೆ, ಶಾಸಕರ ಕೆಲವು ಆಪ್ತರ ನಡವಳಿಕೆ, ಹೀಗೆ ಸಭೆಯಲ್ಲಿ ಹಲವು ಕಾರ್ಯಕರ್ತರು ಹಲವು ವಿಚಾರಗಳ ಬಗ್ಗೆ ಆಕ್ರೋಶದಿಂದ ಮಾತನಾಡಿದರು.
ಒಂದು ಹಂತದಲ್ಲಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಅವರ ರಾಜೀನಾಮೆಯನ್ನು ಕೂಡ ಹಲವರು ಒತ್ತಾಯಿಸಿದರು, ಜಿಲ್ಲಾಧ್ಯಕ್ಷರಾಗಿ ಅವರು ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಹಾಗೂ ಪಕ್ಷದ ಕೆಲಸದಲ್ಲಿ ಅವರು ತೋರಿರುವ ಅಸಡ್ಡಯನ್ನು ಹಲವರು ವ್ಯಕ್ತಪಡಿಸಿ ತಮ್ಮ ಅಸಮಾಧಾನವನ್ನು ತೋರ್ಪಡಿಸಿದರು.
ಸಭೆಯಲ್ಲಿ ಹಲವರ ವಿರುದ್ಧ ಆರೋಪಗಳು ಕೂಡ ಕೇಳಿ ಬಂದವು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಸುಜಾ ಕುಶಲಪ್ಪ ಹಾಗೂ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಗೈರು ಹಾಜರಾಗಿದ್ದರು. ಉಳಿದಂತೆ ಪಕ್ಷದ ವಿವಿಧ ಘಟಕದ ಮುಖಂಡರು ಕ್ಷೇತ್ರದ ಬಹುತೇಕ ಪಕ್ಷದ ಪ್ರಮುಖ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಶಾಸಕ ಕೆ ಜಿ ಬೋಪಯ್ಯ, ಕಾರ್ಯಕರ್ತರು ಎಲ್ಲರೂ ಕೂಡ ಶ್ರಮವಹಿಸಿ ಕೆಲಸವನ್ನು ನಿರ್ವಹಿಸಿದ್ದಾರೆ, ಕಳೆದ ಬಾರಿಗಿಂತ ಹೆಚ್ಚು ಮತ ನಮ್ಮ ಪಕ್ಷಕ್ಕೆ ದೊರಕ್ಕಿದೆ ಸಾಕ್ಷಿ. ಆದರೆ ಪಕ್ಷದೊಳಗೆ ಹೊಂದಾಣಿಕೆಯ ಕೊರತೆಯಿಂದ ಇನ್ನಷ್ಟು ಮತಗಳನ್ನು ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ಇದರ ಹೊಣೆಯನ್ನು ನಾನು ಹೊತ್ತಿಕೊಳ್ಳುತ್ತೇನೆ ಮುಂದೆ ಪಕ್ಷವನ್ನು ಬಲಪಡಿಸುವತ್ತ ಎಲ್ಲರೂ ಚಿತ್ತಹರಿಸಬೇಕು ಎಂದರು. ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸುವಂತೆ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಬಿನ್ ದೇವಯ್ಯ ಮಾತನಾಡಿ ನಾನು ಪ್ರಾಮಾಣಿಕವಾಗಿ ಪಕ್ಷದಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ ನಾನು ಯಾವುದೇ ರೀತಿಯ ಅಸಡ್ಡೆ ಮನೋಭಾವನೆಯನ್ನು ತೋರಿಲ್ಲ, ಪಕ್ಷದ ಕಾರ್ಯಕರ್ತರೆಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿದ್ದೇನೆ ಮುಂದಿವೂ ಕೂಡ ಪಕ್ಷದ ಬಲ ವರ್ಧನೆಗೆ ಅವಿರತ ಶ್ರಮವನ್ನು ಪಡುತ್ತೇನೆ. ನಾನು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ ನೀವೆಲ್ಲ ಬಯಸಿದ್ದರೆ ಈಗಲೇ ನಾನು ನನ್ನ ರಾಜೀನಾಮೆಯನ್ನು ನೀಡುತ್ತೇನೆ ಎಂದು ಸಭೆಯಲ್ಲಿ ಪ್ರಕಟಿಸಿದರು.
ಈ ಸಂದರ್ಭ ಹಲವು ಕಾರ್ಯಕರ್ತರು ಸಮಾಧಾನಪಡಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.ಬಿಜೆಪಿಯ ಆತ್ಮಾವಲೋಕನ ಸಭೆಯಲ್ಲಿ ಪಕ್ಷದ ಸೋಲಿಗೆ ಕಾರಣವಾದ ಹಲವಾರು ವಿಚಾರಗಳು ಬಹಿರಂಗಗೊಂಡಿದ್ದು ವಿಶೇಷವಾಗಿತ್ತು.