ಕೊಡಗು: ಮಡಿಕೇರಿಯಲ್ಲಿ ಎ.ಸಿ.ಬಿ.ದಾಳಿ ಸಂದರ್ಭ ಲಕ್ಷಾಂತರ ರೂಪಾಯಿ ಲಂಚದ ಹಣ ಸಹಿತ ಸಿಕ್ಕಿ ಬಿದ್ದು ಜೈಲು ಸೇರಿ, ಅಮಾನತು ಆಗಿದ್ದ ಕೊಡಗು ಜಿಲ್ಲಾ ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಇಂಜಿನಿಯರ್ ಶ್ರೀಕಂಠಯ್ಯನನ್ನು ಮತ್ತೆ ಜಿಲ್ಲೆಗೆ ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಸಚಿವ ಈಶ್ವರಪ್ಪ ಮತ್ತು ಶಾಸಕ ಕೆ.ಜಿ.ಬೋಪಯ್ಯ ಅವರ ಮೇಲೆ ಪಿ.ಸಿ.ಆರ್.(Private Case Report)ದಾಖಲಿಸಲು ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ಅರ್ಜಿದಾರ, ದೂರುದಾರ ರವಿಚಂಗಪ್ಪ ಅವರಿಂದ ಎ.ಸಿ.ಬಿ.ಯ ಎ.ಡಿ.ಜಿ.ಪಿ.ಅವರು ಅವರಿಂದ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದೆ.
ಆಗಿನ ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರ ಶಾಸಕ, ರಾಜ್ಯ ಸರಕಾರಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ಮತ್ತು ವಿಧಾನ ಸಭಾ ಮಾಜಿ ಅಧ್ಯಕ್ಷ ರಾಗಿದ್ದ ಕೆ.ಜಿ.ಬೋಪಯ್ಯ ಅವರು ಪತ್ರ ಬರೆದು ಶ್ರೀಕಂಠಯ್ಯನನ್ನು ಮತ್ತೆ ಜಿಲ್ಲೆಗೆ ನೇಮಿಸಿಕೊಂಡಿರುವ ಪ್ರಕರಣ ಮತ್ತು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ (ಐ. ಎ.ಎಸ್) ಅವರನ್ನು ಕೇವಲ 7 ತಿಂಗಳಲ್ಲಿ ವರ್ಗಾವಣೆಗೊಳಿಸಿ ತಮಗೆ ನಿಷ್ಠರಾದ ಜಿಲ್ಲಾಧಿಕಾರಿಯ ಹೆಸರು ಉಲ್ಲೇಖಿಸಿ ಪತ್ರ ಬರೆದು ಕೊಡಗು ಜಿಲ್ಲೆಗೆ ನೇಮಿಸಿಕೊಂಡ ಪ್ರಕರಣದ ಬಗ್ಗೆ ಕೊಡಗು ಜಿಲ್ಲೆಯ ಕಾವೇರಿ ಸೇನೆ ಸಂಚಾಲಕ ಕಿಮ್ಮುಡಿರ ರವಿಚಂಗಪ್ಪ ಅವರು ಭ್ರಷ್ಟಾಚಾರ ಆರೋಪದಡಿ ಎ.ಸಿ.ಬಿ.ಗೆ ಸಲ್ಲಿಸಿದ್ದ ದೂರನ್ನು ಎ.ಸಿ.ಬಿ.ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಹಿನ್ನಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಮೊರೆ ಹೋಗಿದ್ದರು. ಸದರಿ ಜನಪ್ರತಿನಿಧಿಗಳ ನ್ಯಾಯಾಲಯವು ಈ ಪ್ರಕರಣ ದಡಿ ಮಾಜಿ ಸಚಿವ ಈಶ್ವರಪ್ಪ ಮತ್ತು ಶಾಸಕ ಕೆ.ಜಿ.ಬೋಪಯ್ಯ ಅವರ ಮೇಲೆ ಪಿ.ಸಿ.ಆರ್.(Private Case Report)ದಾಖಲಿಸಲು ನಿರ್ದೇಶನ ನೀಡಿದ್ದು,ಈ ಪ್ರಕರಣದಲ್ಲಿ ಅರ್ಜಿದಾರ/ದೂರುದಾರ ರವಿಚಂಗಪ್ಪ ಅವರಿಂದ ಎ.ಸಿ.ಬಿ.ಯ ಎ.ಡಿ.ಜಿ.ಪಿ.ಅವರು ಅವರಿಂದ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದೆ. ಇದರಿಂದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಈ ಬಗ್ಗೆ ರವಿಚಂಗಪ್ಪ ಅವರು ಶನಿವಾರ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಈಶ್ವರಪ್ಪ ಮತ್ತು ಶಾಸಕ ಕೆ.ಜಿ.ಬೋಪಯ್ಯ ಅವರು ಇಂಜಿನಿಯರ್ ಶ್ರೀಕಂಠಯ್ಯ ಅವರನ್ನು ಜಿಲ್ಲೆಗೆ ಮತ್ತೆ ನೇಮಿಸಲು ರೂ.2.5 ಕೋಟಿ ಲಂಚ ಸಲ್ಲಿಕೆಯಾಗಿದೆ ಎಂದು ರವಿಚಂಗಪ್ಪ ಗಂಭೀರ ಆರೋಪ ಮಾಡಿದ್ದಾರೆ
ಬೆಂಗಳೂರು ಎ.ಸಿ.ಬಿ ಯ ಎ.ಡಿ.ಜಿ. ಪಿ. ಅವರಿಗೆ ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಮತ್ತು ಆಗಿನ ರಾಜ್ಯ ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರ ಮೇಲೆ ಕೊಡಗು ಜಿಲ್ಲಾ ಪಂಚಾಯತ್ ರಾಜ್ ಮುಖ್ಯ ಇಂಜಿನಿಯರ್ ಆಗಿದ್ದ ಎಲ್.ಶ್ರೀಕಂಠಯ್ಯ ಅವರನ್ನು ಮಡಿಕೇರಿ ವಿಭಾಗಕ್ಕೆ ವರ್ಗಾವಣೆ ಮಾಡಿರುವ ಕುರಿತು ನೀಡಿರುವ ದೂರಿಗೆ ಅನುಗುಣವಾಗಿ ಕೇಳಲಾಗಿರುವ ಮಾಹಿತಿ ಮತ್ತು ಪೂರಕ ದಾಖಲೆಗಳ ಸಲುವಾಗಿ ಉತ್ತರ ನೀಡಲಾಗಿದೆ ಎಂದು ರವಿಚಂಗಪ್ಪ ವಿವರಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಶ್ರೀ.ಬಿ.ಎಂ.ನಂದಕುಮಾರ್ ಅವರು ಇಂಜಿನಿಯರ್ ಶ್ರೀಕಂಠಯ್ಯ ತನ್ನ ಬಿಲ್ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಸದರಿ ತಮ್ಮ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪುಕಾರು ನೀಡಿದ್ದು,ಈ ಬಗ್ಗೆ ನಡೆದ ಎ.ಸಿ.ಬಿ.ದಾಳಿಯಲ್ಲಿ ಸದರಿ ಶ್ರೀಕಂಠಯ್ಯ ನವರು ತನ್ನ ಕಚೇರಿಯ ಇತರ ಸಿಬ್ಬಂದಿ ಗಳೊಂದಿಗೆ ಲಂಚದ ಹಣ ಪಡೆಯುವಾಗ ಹಣ ಸಮೇತ ದಸ್ತಗಿರಿಯಾಗಿ ಅಮಾನತು ಗೊಂಡಿರುತ್ತಾರೆ ಮತ್ತು ಸದರಿ ಅಧಿಕಾರಿಯ ಲೀನ್ ಅನ್ನು ಮುಖ್ಯ ಇಂಜಿನಿಯರ್ ಕಚೇರಿ ಪಂಚಾಯತ್ ರಾಜ್ ಇಲಾಖೆ ಬೆಂಗಳೂರಿಗೆ ವರ್ಗಾಯಿಸಿ ಅದೇಶಿಸಿರುತ್ತಾರೆ.
ಆದರೆ ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ನನವರು ಜನಪ್ರತಿನಿಧಿ ಕಾಯಿದೆ ಪ್ರಕಾರ ತನ್ನ ಕ್ಷೇತ್ರಕ್ಕೆ ಯಾವುದೇ ಅಧಿಕಾರಿಯನ್ನು ನಿರ್ದಿಷ್ಟವಾಗಿ ಹೆಸರಿಸಿ ವರ್ಗಾರಿಸಿಕೊಳ್ಳುವ ಕಾನೂನು ಇಲ್ಲದಿದ್ದರೂ,ತನ್ನ ಅಧಿಕಾರವನ್ನು ದುರುಪಯೋಗಗೊಳಿಸಿ ಲಂಚ ಪ್ರಕರಣದಲ್ಲಿ ದಸ್ತಗಿರಿಗೊಂಡು ಅಮಾನತು ಗೊಂಡಿದ್ದ ಅಧಿಕಾರಿ ಶ್ರೀಕಂಠಯ್ಯ ನವರನ್ನು ಪುನಃ ಕೊಡಗು ಜಿಲ್ಲೆಗೆ ನೇಮಿಸುವಂತೆ ಕೋರಿ ಅಂದಿನ ಪಂಚಾಯತ್ ರಾಜ್ -ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ.ಈಶ್ವರಪ್ಪಗೆ ತಾ.07.12.2021 ರಂದು ಪತ್ರ ಬರೆದು ಅವರನ್ನು ಪುನಃ ಕೊಡಗು ಜಿಲ್ಲೆಗೆ ಕರೆತಂದು ಗ್ರಾಮೀಣ ನೀರು ಸರಬರಾಜು -ನೈರ್ಮಲ್ಯ ಇಲಾಖೆಗೆ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ನೇಮಕ ಮಾಡಿರುವುದು ಭ್ರಷ್ಟಾಚಾರದ ಪರಾಕಾಷ್ಠೆ ಆಗಿರುತ್ತದೆ.ಈ ಸದರಿ ಅಧಿಕಾರಿಯು ಕೊಡಗು ಜಿಲ್ಲೆಯಲ್ಲಿ ರಾಜಕೀಯ ಮುತ್ಸದ್ದಿಗಳ ಕೃಪೆಯಿಂದ ಕಳೆದ 35 ವರ್ಷ ತನ್ನ ಸೇವಾವಧಿಯಲ್ಲಿ ಕಾರ್ಯನಿರ್ವಹಿಸಿರುವುದು ಭ್ರಷ್ಟಾಚಾರದ ಇನ್ನೊಂದು ಮುಖವಾಗಿರುತ್ತದೆ.ಈ ಘಟನೆಗೆ ಸಂಬಂಧಿಸಿದಂತೆ ಸದರಿ ಕೆ.ಜಿ.ಬೋಪಯ್ಯ,ಎಲ್.ಶ್ರೀಕಂಠಯ್ಯ, ಕೆ.ಎಸ್.ಈಶ್ವರಪ್ಪ ಅವರ ಮೇಲೆ ಬೆಂಗಳೂರು 81ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ (ಚುನಾಯಿತ ಪ್ರತಿನಿಧಿಗಳ ವಿರುದ್ಧ ದಾವೆ ಹೂಡುವ ನ್ಯಾಯಾಲಯ) ಈಗಾಗಲೇ ಖಾಸಗಿ ಮೊಕದ್ದಮೆ ಸಂಖ್ಯೆ.27/2022 ಎಂದು ದಾಖಲಿಸಿದ್ದು ಇತ್ಯರ್ಥಕ್ಕೆ ಬಾಕಿ ಇರುತ್ತದೆ.ಈ ಹಿಂದೆ ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ ನವರು ಈ ಮೇಲೆ ಉಲ್ಲೇಖಿಸಿರುವ ಜನಪ್ರತಿನಿಧಿಗಳ ಕಾಯಿದೆ ಕಾನೂನುಗಳನ್ನು ಗಾಳಿಗೆ ತೂರಿ ಈ ಹಿಂದೆ ಕೊಡಗು ಜಿಲ್ಲಾಧಿಕಾರಿಗಳಾಗಿದ್ದ ಚಾರುಲತಾ ಸೋಮಲ್ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ,ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ನೇರ ಪತ್ರ ಬರೆದು ತನ್ನ ಅಣತಿಯಂತೆ ನಡೆಯುವ ವಾಟರ್ ಶೆಡ್ ಡೆವಲಪ್ಮೆಂಟ್ ನಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಬಿ.ಸಿ.ಸತೀಶ್ ಅವರನ್ನೇ ಕೊಡಗು ಜಿಲ್ಲಾದಿಕಾರಿಗಳಾಗಿ ನೇಮಿಸಬೇಕೆಂದು ತಾಕೀತು ಮಾಡಿ ಸದರಿ ಅವರನ್ನೇ ಕೊಡಗು ಜಿಲ್ಲಾಧಿಕಾರಿಗಳಾನ್ನಾಗಿ ನೇಮಿಸುವಲ್ಲಿ ಸಫಲರಾಗಿದ್ದು ಭ್ರಷ್ಟಾಚಾರದ ಪರಾಕಾಷ್ಠೆ ಆಗಿರುತ್ತದೆ.ಆ ದ್ದರಿಂದ ಕೊಡಗು ಜಿಲ್ಲೆಯಲ್ಲಿರುವ ನಿಷ್ಠ ಅಧಿಕಾರಿಗಳನ್ನು ತನ್ನ ಅಧಿಕಾರ ದುರುಪಯೋಗ ಮಾಡಿ ಜಿಲ್ಲೆಯಿಂದ ಎತ್ತಂಗಡಿ ಮಾಡಿ ತನಗೆ ಬೇಕಾದ ಮತ್ತು ತನಗೆ ನಿಷ್ಠೆಯಿಂದ ಇರುವ ಭ್ರಷ್ಟ ಅಧಿಕಾರಿಗಳನ್ನು ಕೊಡಗು ಜಿಲ್ಲೆಯಲ್ಲಿ ನೇಮಿಸಿ,ಎಲ್ಲಾ ಇಲಾಖೆಗಳನ್ನು ಭ್ರಷ್ಟ ಅಧಿಕಾರಿಗಳಿಂದ ತುಂಬಿಸಿರುವುದು ಸದರಿ ಶಾಸಕರ ಭ್ರಷ್ಟಾಚಾರಕ್ಕೆ ನಿದರ್ಶನವಾಗಿರುತ್ತದೆ ಮತ್ತು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ರವಿಚಂಗಪ್ಪ ಅವರು ತಮ್ಮ ಮನವಿಯಲ್ಲಿ ಕೋರಿದ್ದಾರೆ.
ಗುತ್ತಿಗೆದಾರ ನಂದಕುಮಾರ್ ಅವರು ಮಾತನಾಡಿ ವರ್ಕ್ ಆರ್ಡರ್ ನೀಡಲು 2.50 ಲಕ್ಷ ರೂ.ಲಂಚ ಬೇಡಿಕೆ ಇಟ್ಟಿದ್ದ ಇಂಜಿನಿಯರ್ ಶ್ರೀಕಂಠಯ್ಯ ಅವರು ಎ. ಸಿ.ಬಿ.ಗೆ ಸಿಕ್ಕಿ ಬಿದ್ದು 9 ತಿಂಗಳು ಆಗಿದೆ,ಇಂದಿಗೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ.ಇದರಿಂದ ಎ.ಸಿ.ಬಿ.ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆಯೇ ಎಂಬ ಸಂಶಯ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾವೇರಿ ಸೇನೆ ಉಪಾಧ್ಯಕ್ಷ ಹೊಸಬೀಡು ಶಶಿ,ಸದಸ್ಯ ಸಿ.ಎ.ಕಾರ್ಯಪ್ಪ,ಗುತ್ತಿಗೆದಾರ ದೀಪಕ್ ಮತ್ತು ನಂದಕುಮಾರ್ ಹಾಜರಿದ್ದರು.