ಮಡಿಕೇರಿ: ಬಜರಂಗ ದಳ ಭಯೋತ್ಪಾದಕ ಸಂಘಟನೆಯಲ್ಲ, ಅದು ಅಲ್-ಖೈದಾ ಅಲ್ಲ, ಅದೊಂದು ದೇಶಭಕ್ತ ಸಂಘಟನೆ, ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ, ಅಧಿಕಾರಕ್ಕೆ ಬಂದ ಮೇಲೆ ಬಜರಂಗ ದಳವನ್ನ ನಿಷೇಧ ಮಾಡುವುದಾಗಿ ಹೇಳಿದ್ದಾರೆ, ಅವರು ಅವಸಾನ ಹೊಂದುವುದು ಖಚಿತ ಎಂದು ಮಡಿಕೇರಿ ಕ್ಷೇತ್ರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಶಿರಂಗಾಲದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಜರಂಗ ದಳ ದೇಶಾಭಿಮಾನವನ್ನು ಪಸರಿಸುತ್ತಿರುವ ದೇಶಭಕ್ತರ ಸಂಘಟನೆ. ಅದು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಇಂತಹ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದಿರುವ ಸಿದ್ಧರಾಮಯ್ಯ ಈ ಬಾರಿ ವರುಣದಲ್ಲಿ ಸೋಲುವುದು ಖಚಿತ ಜೊತೆಗೆ ಕಾಂಗ್ರೆಸ್ 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದರು.
ಇಂಗ್ಲೆಂಡ್ ನಿಂದ ಟಿಪ್ಪು ಖಡ್ಗ ತಂದ ವಿಜಯ್ ಮಲ್ಯ ಮಣ್ಣು ಮುಕ್ಕಿದರು, ಟಿಪ್ಪು ಧಾರವಾಹಿ ಮಾಡಿದ ಸಂಜಯ್ ಖಾನ್ ಮಣ್ಣು ಮುಕ್ಕಿದರು, ಇದೀಗ ಅದು ಟಿಪ್ಪು ಜಯಂತಿ ಮತ್ತೆ ಮಾಡುತ್ತೇವೆ ಎನ್ನುತ್ತಿರುವ ಸಿದ್ಧರಾಮಯ್ಯನವರ ಸರದಿ ಎಂದ ಅಪ್ಪಚ್ಚು ರಂಜನ್, ಬಿಜೆಪಿ ಈ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದರು.