News Karnataka Kannada
Friday, April 26 2024
ಮೈಸೂರು

ಮೋದಿ ಬಂದು ಜೆಡಿಎಸ್ ತಿಥಿ ಮಾಡಿದರು: ಜಿ.ಟಿ.ದೇವೇಗೌಡ

Modi came and made JD(S) tithi
Photo Credit : By Author

ಮೈಸೂರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಮೈಸೂರು ಭಾಗಕ್ಕೆ ದಂಡೆತ್ತಿ ಬಂದರೂ ಗೆದ್ದಿದ್ದು ಮಾತ್ರ ಒಂದು ಸ್ಥಾನ. ಅವರು ಜೆಡಿಎಸ್ ತಿಥಿ ಮಾಡಿದ್ದಲ್ಲದೆ ಬಿಜೆಪಿಯ ಕತೆಯನ್ನೂ ಮುಗಿಸಿದರೂ ಎಂದು ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಧನ್ಯತಾ ಸಮಾಗಮ ಕಾರ್ಯಕ್ರಮದಲ್ಲಿ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಬಿಜೆಪಿ ಕಟ್ಟಿ ಬೆಳೆಸಿದವರು ಯಡಿಯೂರಪ್ಪ. ಅವರನ್ನೇ ಬದಿಗಿಟ್ಟು ಪಕ್ಷ ಕಟ್ಟಲು ಮುಂದಾದರು. ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡುವ ಬದಲು ಮೈಸೂರು ಭಾಗಕ್ಕೆ ಬಂದರು. ಆದರೆ, ಗೆದ್ದಿದ್ದು ಎಷ್ಟು ಸ್ಥಾನ? ಹಿಜಾಬ್, ಹಲಾಲ್ ಎಂದು ಕೋಮು ಭಾವನೆ ಕೆರಳಿಸಿ ಅಲ್ಪಸಂಖಾತರನ್ನು ದೂರವಿಟ್ಟರು. ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಈಗ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಜೋಡಿ ಹುಲಿಯಾಗಿದ್ದಾರೆ. ಬಿಜೆಪಿಯವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಜೆಡಿಎಸ್‌ನಲ್ಲಿ ಬೇಸರಗೊಂಡಿದ್ದ ನನ್ನೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಣದೀಪ್ ಸುರ್ಜೆವಾಲಾ ಹರೀಶ್‌ಗೌಡರನ್ನು ಲೋಕಸಭೆಗೆ ನಿಲ್ಲಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ನಿಲ್ಲಿ, ಸರ್ಕಾರ ಬಂದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, 2013ರಲ್ಲಿ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರಿಂದ ಅವಕಾಶ ಸಿಕ್ಕಿರಲಿಲ್ಲ. ಹರೀಶ್‌ಗೌಡ ಹತ್ತು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದರಿಂದ ಶಾಸಕರನ್ನಾಗಿಯೇ ಮಾಡುವಂತೆ ಮುಖಂಡರು, ಯುವಕರು ಒತ್ತಡ ಹೇರಿದ್ದರು. ಹೀಗಾಗಿ ಈ ಬಾರಿ ಹುಣಸೂರಿನಿಂದ ಸ್ಪರ್ಧಿಸಬೇಕಾಯಿತು ಎಂದರು.

ನಾನು ಮತ್ತು ಸಿದ್ದರಾಮಯ್ಯ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದವರು. ಅವರ ವಿರುದ್ಧ ಚುನಾವಣೆಗೆ ನಿಲ್ಲುವ ಮನಸ್ಸಿರಲಿಲ್ಲ. 2013ರಲ್ಲಿ ನನ್ನ ತವರಾದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದೆ. ಮೂವರು ಒಕ್ಕಲಿಗರು ನಿಂತಿರುವ ಕಾರಣ ಜಿ.ಟಿ.ದೇವೇಗೌಡ ಸೋಲುತ್ತಾನೆಂದು ಹೇಳಿದರೂ ಕ್ಷೇತ್ರದ ಜನರು ಕೈಬಿಡಲಿಲ್ಲ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವರು ಜಿ.ಟಿ.ದೇವೇಗೌಡರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ, ಸಿಐಡಿಗೆ ಕೊಡಿ ಎಂದು ಒತ್ತಾಯಿಸಿದ್ದರು. ಆದರೆ, ತನಿಖೆ ಏನಾಯ್ತು? ಕೆಲವರು ಅಪ್ಪ-ಮಗನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಕನಸು ಕಂಡಿದ್ದರು. ಆದರೆ, ನಾವೆಂದಿಗೂ ಸತ್ಯ, ಪ್ರಾಮಾಣಿಕತೆ ಬಿಟ್ಟು ನಡೆದಿಲ್ಲ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 8 ಜಿಪಂ, ತಾಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿದ್ದೆವು. ಬಿಜೆಪಿಯವರು ಸಿಎಂ ಆಗಿದ್ದಾಗಲೂ ಮೈಮುಲ್‌ನಲ್ಲಿ ಗೆದ್ದಿದ್ದೇವೆ. ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಮುಖಂಡರು, ಕಾರ್ಯಕರ್ತರು ಎದುರಿಸಲು ಸಜ್ಜಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬೆಳವಾಡಿ ಶಿವಮೂರ್ತಿ, ಆರ್.ಲಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಗಂಗಾಧರಗೌಡ, ಹಿನಕಲ್ ರಾಜು, ಗೆಜ್ಜಗಳ್ಳಿ ಲೋಕೇಶ್, ನಾಗನಹಳ್ಳಿ ದಿನೇಶ್, ಎಸ್‌ಸಿ ಘಟಕ ರಾಜ್ಯ ಅಧ್ಯಕ್ಷ ಶಿವಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು