ಮೈಸೂರು: ಟಿಬೆಟ್ ಧರ್ಮಗುರು ಹನ್ನೊಂದನೆ ಪಂಚೆನ್ ಲಾಮಾ ಗೆಂಡುನ್ ಚೋಯ್ಕಿ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಮಧ್ಯಮ ಗತಿಯ ಟಿಬೆಟ್ ಯುವ ಸಂಘಟನೆ ಹಾಗೂ ಧಾರ್ಮಿಕ ಟಿಬೆಟ್ ಮಹಿಳಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ಚೀನಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಚೀನಾ ಸರ್ಕಾರ ಮೇ.17, 1995ರಲ್ಲಿ ಪಂಚೆನ್ ಲಾಮಾ ಅವರನ್ನು ಅಕ್ರಮವಾಗಿ ಬಂಧಿಸಿದ್ದು, ಅವರು ಅನುಮಾನಾಸ್ಪದವಾಗಿ ಅಸುನೀಗಿದ್ದಾರೆ ಎಂದು ಆರೋಪಿಸಿದರು.
ಟಿಬೆಟ್ ಧರ್ಮಗುರು ದಲಾಯಿಲಾಮ ಅವರು ಗೆಂಡ್ಯುನ್ ಚೋಯ್ಕಿಯವರನ್ನು 11ನೇ ಪಂಚೆನ್ ಲಾಮಾರನ್ನಾಗಿ ಗುರುತಿಸಿದ್ದರು. ಅದಾದ 4 ತಿಂಗಳಲ್ಲಿ ಅವರ 6ನೇ ವಯಸ್ಸಿನಲ್ಲಿ ಕುಟುಂಬ ಸಮೇತ ಗೆಂಡ್ಯುನ್ ಚೋಯ್ಕಿಯವರನ್ನು ಚೀನಾ ಸರ್ಕಾರ ಅಪಹರಣ ಮಾಡಿದೆ. ಅಂದಿನಿಂದ ಇಲ್ಲಿಯವರೆಗೆ ಅವರ ಇರುವಿಕೆ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ಕೊಡಲು ಒಪ್ಪುತ್ತಿಲ್ಲ ಎಂದು ಕಿಡಿ ಕಾರಿದರು.
ಪಂಚೆನ್ ಲಾಮಾ ಅವರನ್ನು ಅತ್ಯಂತ ಕಿರಿಯ ವಯಸ್ಸಿಗೆ ರಾಜಕೀಯ ಖೈದಿಯನ್ನಾಗಿ ಮಾಡಲಾಗಿದೆ. ಸಂಯುಕ್ತ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಮಧ್ಯಸ್ಥಿಕೆ ನಡೆದರೂ ಚೀನಾ ಸರ್ಕಾರ ಪಂಚೆನ್ ಲಾಮಾ ಅವರ ಬಗ್ಗೆ ಯಾವುದೇ ಸುಳಿವು ನೀಡುತ್ತಿಲ್ಲ. ಈ ಅವಧಿಯಲ್ಲಿ ಲಾಮಾ ಅವರು ಧಾರ್ಮಿಕ ಹಾಗೂ ಟಿಬೆಟ್ ಬೌದ್ಧ ಧರ್ಮೀಯ ಶಿಕ್ಷಣದಿಂದ ವಂಚಿತರಾಗಿದ್ದಾರೆ. ೨೮ ರ್ಷಗಳಿಂದ ಅವರು ರಾಜಕೀಯ ಖೈದಿಯಾಗಿ ಉಳಿದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಚೀನಾ ಸರ್ಕಾರ ಕೂಡಲೇ ಪಂಚೆನ್ ಲಾಮಾ ಅವರ ಇರುವಿಕೆ ಹಾಗೂ ಧಾರ್ಮಿಕ ಶಿಕ್ಷಣದ ಬಗ್ಗೆ ಖಾತ್ರಿ ಪಡಿಸಬೇಕು. ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಸಹಜ ಜೀವನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತೆಂಜಿನ್ ಡೋಲ್ಮಾ, ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.