ಮೈಸೂರು: ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಚಾಮರಾಜಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿರುವ ಶಾಸಕ ಎಲ್.ನಾಗೇಂದ್ರ ಅವರು ಬ್ರಾಹ್ಮಣ ಸಮುದಾಯದ ಮತದಾರರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೂರು ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೂಡ ಒಕ್ಕಲಿಗರಾಗಿದ್ದಾರೆ. ಹೀಗಾಗಿ ಒಕ್ಕಲಿಗ ಮತಗಳು ಹಂಚಿಹೋಗಲಿದ್ದು, ಇತರೆ ಸಮುದಾಯದ ಮತದಾರರು ನೀಡುವ ಮತಗಳು ನಿರ್ಣಾಯಕವಾಗಲಿವೆ. ಹೀಗಾಗಿ ಎಲ್ಲ ಸಮುದಾಯಗಳನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ನಡುವೆ ಶಾಸಕ ಎಲ್. ನಾಗೇಂದ್ರ ಚಾಮರಾಜ ಕ್ಷೇತ್ರದ ಬೃಂದಾವನ ಬಡಾವಣೆಯಲ್ಲಿ ಬ್ರಾಹ್ಮಣ ಸಂಘ ಸಂಸ್ಥೆಗಳ ಸಭೆಯನ್ನು ನಡೆಸಿ ಮತಯಾಚನೆ ಮಾಡಿದ್ದಾರೆ.
ಸಭೆಯಲ್ಲಿ ಒಂಟಿಕೊಪ್ಪಲು ವಿಪ್ರರ ವೃಂದ, ಬೃಂದಾವನ ಬ್ರಾಹ್ಮಣ ಬಳಗ, ಹೆಬ್ಬಾಳ್ ವಿಜಯನಗರ ಬ್ರಾಹ್ಮಣ ಸಂಘ, ಮಾಧ್ವ ಸಮೂಹ, ಅಯ್ಯಂಗಾರ್ ವೇದಿಕೆ, ಮುಲಕನಾಡು ಸಂಘ, ಶಂಕರಬಳಗ, ಸೇರಿದಂತೆ ವಿವಿಧ ಬಡಾವಣೆಯ ನೂರಾರು ವಿಪ್ರರು ಮುಖಂಡರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಅವರು ಚಾಮರಾಜ ಕ್ಷೇತ್ರದಲ್ಲಿ 25,000ಕ್ಕೂ ಹೆಚ್ಚು ವಿಪ್ರರಿದ್ದಾರೆ, ಬ್ರಾಹ್ಮಣರು ಬಿಜೆಪಿಯ ಅಭ್ಯರ್ಥಿ ಎಲ್. ನಾಗೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರಲ್ಲದೆ, ಕ್ಷೇತ್ರದಲ್ಲಿ ಶಾಸಕನ್ನು 30ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಲು ಪಣತೊಡಲು ಮನವಿ ಮಾಡಿದರು.
ಸಭೆಯಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್, ಪುರೋಹಿತರಾದ ಕೃಷ್ಣಮೂರ್ತಿ, ನರಸಿಂಹ ಮೂರ್ತಿ, ಹೆಬ್ಬಾಳ್ ಬ್ರಾಹ್ಮಣ ಸಂಘದ ಗುರುಪ್ರಸಾದ್, ಅನ್ನಪೂರ್ಣೆಶ್ವರಿ ದೇವಸ್ಥಾನದ ಪ್ರದೀಪ್ ದೀಕ್ಷಿತ್, ಪುಟ್ಟಸ್ವಾಮಿ, ಶ್ರೀನಾಥ್, ಶ್ರೀನಿವಾಸ್, ವಿಘ್ನೇಶ್ವರ ಭಟ್, ಸುದರ್ಶನ್, ಲಕ್ಷ್ಮಿ, ರಾಜೇಶ್ವರಿ, ಸೌಮ್ಯ, ಸೀತಾಲಕ್ಷ್ಮಿ ಇನ್ನಿತರರು ಇದ್ದರು.