ಮೈಸೂರು: ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಟಿ. ನರಸಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣ ಪರವಾಗಿ ಸಿಎಂ ಬೊಮ್ಮಾಯಿ ಭರ್ಜರಿ ರೋಡ್ ಶೋ ನಡೆಸಿದರು.
ಬಳಿಕ ಮಾತನಾಡಿದ ಅವರು, ವರುಣ ಮತ್ತು ಟಿ.ನರಸಿಪುರದಲ್ಲಿನ ಜಿಡ್ಡುಗಟ್ಟಿದ ಆಡಳಿತ ಬದಲಾವಣೆ ಆಗಬೇಕಿದೆ. ರೈತರು, ಯುವಕರು, ಮಹಿಳೆಯರು ಎಲ್ಲರೂ ಸೇರಿ ಸೋಮಣ್ಣ ಅವರನ್ನು ಗೆಲ್ಲಿಸಿಕೊಂಡು ಬರಲು ಒಟ್ಟಾಗಿರುವುದರಿಂದ ಈ ಕ್ಷೇತ್ರ ವರ್ಣಮಯ ಆಗಿದೆ. ಸೋಮಣ್ಣ ಬೆಳಗ್ಗೆ ಐದು ಗಂಟೆಗೆ ಎದ್ದು ಸೇವೆ ಆರಂಭಿಸುತ್ತಾರೆ. ಐದು ಗಂಟೆಗೆ ಎದ್ದು ಸೇವೆ ಮಾಡುವ ಸೋಮಣ್ಣ ಬೇಕಾ? ಬೇಡ್ವಾ, ಈ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ. ಚಾಮರಾಜನಗರ, ಮೈಸೂರು ಅಭಿವೃದ್ಧಿ ಮಾಡಲು ಸೋಮಣ್ಣ ಬಂದಿದ್ದಾರೆ ಎಂದರು.
ವಿ.ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ. ಇಲ್ಲಿ ಆಡಳಿತ ನಡೆಸಿದವರು ಜಿಡ್ಡುಗಟ್ಟಿದ ಆಡಳಿತ ನೀಡಿದ್ದಾರೆ. ನೀವು ಸೋಮಣ್ಣ ಅವರನ್ನು ಗೆಲ್ಲಿಸಿದರೆ, ಸಮೃದ್ದಿಯ ಸುಭಿಕ್ಷೆಯ ಸರ್ಕಾರ ಬರಲಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಒಂದು ಕ್ಷೇತ್ರಕ್ಕೆ ತಾಲೂಕು ಕೇಂದ್ರ ಇಲ್ಲ. ಈ ಜಿಡ್ಡುಗಟ್ಟಿದ ಆಡಳಿತ ಎಷ್ಟು ದಿನ ಸಹಿಸಿಕೊಳ್ಳುತ್ತೀರಿ. ಯಾವ ನಾಯಕರು ಇಷ್ಟು ವರ್ಷ ಸೇವೆ ಮಾಡಿದ್ದಾರೆ. ಯಾವ ನಾಯಕನಿಗೆ ಎಲ್ಲ ಜನರನ್ನು ತೆಗೆದುಕೊಂಡು ಹೋಗುವ ಶಕ್ತಿ ಇದೆ, ಆ ನಾಯಕರನ್ನು ನಾವು ಇಲ್ಲಿ ತಂದು ನಿಲ್ಲಿಸಿದ್ದೇವೆ ಎಂದರು.