ಮೈಸೂರು: 75 ವರ್ಷದ ವೃದ್ಧೆಯ ಕೊಲೆಗೆ ಸಂಬಂಧಿಸಿ ಆಕೆಯ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೈಸೂರಿನ ಗಾಯತ್ರಿಪುರಂ ಲೇಔಟ್ ನಿವಾಸಿ 23 ವರ್ಷದ ಸುಪ್ರೀತ್ ಎಂದು ಗುರುತಿಸಲಾಗಿದೆ.
ಅಜ್ಜಿ ಸುಲೋಚನಾ (75) ಸುಪ್ರೀತ್ (23) ನ ಗುಣನಡೆತಗಳನ್ನು ಆಕ್ಷೇಪಿಸಿ ಆಗಾಗ್ಗೆ ಗದರುತ್ತಿದ್ದರು. ಮೇ 28ರಂದು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆರೋಪಿ ತನ್ನ ಅಜ್ಜಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿಟ್ಟಿದ್ದ. ಆದರೆ ಮೃತದೇಹವನ್ನು ಹೇಗೆ ವಿಲೇವಾರಿ ಮಾಡಬೇಕೆಂದು ತಿಳಿಯದೇ ದಿನವಿಡಿ ಕಾರಿನಲ್ಲಿ ಮೈಸೂರಿನಲ್ಲಿ ಸುತ್ತಾಡಿದ್ದ. ಬಳಿಕ ಅಜ್ಜಿಯ ಶವದೊಂದಿಗೆ ನಜರ್ಬಾದ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದ.
ಕೊರಿಯನ್ ವೆಬ್ಸಿರಿಸ್ ನೋಡುತ್ತಿದ್ದ ಸುಪ್ರೀತ್ ಅದರಂತೆ ಅಜ್ಜಿಯನ್ನು ಬೆಂಕಿ ಹಚ್ಚಿ ಕೆಆರ್ಎಸ್ ಅಣೆಕಟ್ಟೆ ಹಿನ್ನೀರಿನಲ್ಲಿ ಎಸೆದಿದ್ದ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.
ಮೇ 30 ರಂದು ವೃದ್ಧೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಮೃತದೇಹ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆಯಾಗಿರಲಿಲ್ಲ. ಸ್ಥಳದಿಂದ ಕೂದಲಿನ ಮಾದರಿಗಳು ಮತ್ತು ಕನ್ನಡಕಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದು, ನಾಪತ್ತೆಯಾದ ವೃದ್ಧೆಗೂ ಶವದಲ್ಲಿ ದೊರೆತ ಅಂಶಗಳಲ್ಲಿ ಸಾಮ್ಯತೆ ಕಂಡುಬಂದು ಸುಪ್ರೀತ್ ನನ್ನು ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.