ಮೈಸೂರು: ನನ್ನ ಐವತ್ತು ವರ್ಷದ ರಾಜಕಾರಣದಲ್ಲಿ ಹಂತ ಹಂತವಾಗಿ ಹೋರಾಟ ಮಾಡಿ ಬಂದಿದ್ದೇನೆ. ಯಾರಿಗೂ ನಾನು ತಲೆಬಾಗುವುದಿಲ್ಲ. ಸಿದ್ದರಾಮಯ್ಯ ಕ್ಷೇತ್ರಗಳನ್ನು ಅಲೆದು ಕೊನೆಗೆ ವರುಣಕ್ಕೆ ಬಂದಿದ್ದು, ಗೆದ್ದು ತೋರಿಸಲಿ ಎಂದು ಸಂಸದ ಎ ಶ್ರೀನಿವಾಸ ಪ್ರಸಾದ್ ಸವಾಲು ಹಾಕಿದರು.
ವರುಣ ವಿಧಾನಸಭಾ ಕ್ಷೇತ್ರದ ನಾಡನಹಳ್ಳಿ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಎಸ್ಸಿ ಮೋರ್ಚಾ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ದಲಿತರ ಸ್ಥಿತಿಗತಿ ಏನಿದೆ ಎಂಬುದನ್ನು ವಿಶೇಷವಾಗಿ ನರೇಂದ್ರ ಮೋದಿ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ಏನು ಅನುಕೂಲಗಳಾಗಿಲ್ಲ. ಸಿದ್ದರಾಮಯ್ಯ ಸ್ವಾರ್ಥ ರಾಜಕಾರಿಣಿ. ತಾವು ಮುಖ್ಯ ಮಂತ್ರಿಯಾಗಲು ತಮ್ಮ ಪಕ್ಷದ ಪರಮೆಶ್ವರ್ ಅವರನ್ನು ಸೋಲಿಸಿದರು. ದಲಿತರನ್ನು ಬೆಳೆಯಲು ಬಿಡುತ್ತಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಹೋರಾಟಗಾರರಲ್ಲ ಅವರು, ಅವಕಾಶವಾದಿ. ಮಲ್ಲಿಕಾರ್ಜುನ ಖರ್ಗೆ ಎಂದೂ ಹೋರಾಟ ಮಾಡಿ ಮೇಲೆ ಬಂದಿಲ್ಲ. ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಆದರೆ,. ಅಧಿಕಾರ ಇಲ್ಲದೆ ಅವರು ಬದುಕಲಾರರು ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಸಿಎಂ ಮಹದೇವಯ್ಯ, ನಟ ಕೆ.ಶಿವರಾಂ, ವರುಣ ಮಂಡಲ ಅಧ್ಯಕ್ಷ ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಸದಾನಂದ, ಗುರುಸ್ವಾಮಿ, ಕಾಪು ಸಿದ್ದಲಿಂಗಸ್ವಾಮಿ, ಚುನಾವಣಾ ವೀಕ್ಷಕ ಚನ್ನೈ ರಾಜ್ಯದ ಪ್ರಕಾಶ್, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ, ಅರಕಲವಾಡಿ ನಾಗೇಂದ್ರ, ಬಿಜೆಪಿ ಮುಖಂಡರಾದ ನರಸಿಂಹ ಮೂರ್ತಿ, ವರಹಳ್ಳಿ ನಾಗೇಂದ್ರ, ಶ್ರೀಧರ ಶಿವಯ್ಯ, ಎಂ.ಮಂಜು, ಆನಂದರಾಜು, ಬಲರಾಜು ನರಸಿಂಹಮೂರ್ತಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.