ಮೈಸೂರು : ನಗರದ ಇಟ್ಟಿಗೆ ಗೂಡಿನ ಎಲ್ ಸಿಎ ಸಿನಿಮ್ಯಾಟಿಕ್ಸ್ ಸಂಸ್ಥೆ ನಿರ್ಮಿಸುತ್ತಿರುವ ವೆಬ್ ಸರಣಿ ಚಿತ್ರದ ಪೋಸ್ಟರ್ ಅನ್ನು ಸಾಹಿತಿ ಬನ್ನೂರು ಕೆ.ರಾಜು ಅವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಕನ್ನಡದ ಬೆಳ್ಳಿತೆರೆಯ ತಾಯಿಬೇರು ಮೈಸೂರು. ರಂಗಭೂಮಿಯಿಂದ ಹಿಡಿದು ಕಿರುತೆರೆ, ಹಿರಿತೆರೆಗಳೆಲ್ಲವೂ ಬಹುತೇಕ ಇಲ್ಲಿಂದಲೇ ಆರಂಭಗೊಂಡಿವೆ. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗುತ್ತಿರುವ ತಾರೆಗಳಿಂದ ಹಿಡಿದು ತಂತ್ರಜ್ಞರವರೆಗೆ ಬಹುಪಾಲು ಪ್ರತಿಭೆಗಳ ಮೂಲನೆಲೆ ಮೈಸೂರಾಗಿದ್ದು, ಅಂತರಾಷ್ಟ್ರೀಯ ಮಟ್ಟಕ್ಕೂ ಇಲ್ಲಿನ ಪ್ರತಿಭೆಗಳು ಬೆಳೆದಿದ್ದು, ಚಿತ್ರರಂಗಕ್ಕೆ ಮೈಸೂರಿನ ಕೊಡುಗೆ ಅಪಾರವಾಗಿದೆ.
ಇಲ್ಲಿ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಬಹುಮುಖ ಪ್ರತಿಭೆಗಳ ಬೆಳವಣಿಗೆ ಮಾತ್ರವಲ್ಲದೆ ಒಟ್ಟಾರೆ ಚಿತ್ರೋದ್ಯಮದ ಬೆಳವಣಿಗೆಯಲ್ಲಿ ಮೈಸೂರಿನ ಪಾತ್ರ ಬಹುದೊಡ್ಡದಿದೆ. ಈಗ ಇದೇ ಮೈಸೂರಿನ ಯುವ ತಂಡ ನಿರ್ದೇಶಕ-ನಿರ್ಮಾಪಕ ಚೇತನ್ ಹನ್ವಿತ್ ಅವರ ನೇತೃತ್ವದಲ್ಲಿ ‘ಥೆಮಿಸ್’ ಕೂಡ ಸಾಗಿದೆ. ಹೆಣ್ಣಿನ ಶೋಷಣೆಯ ವಿರುದ್ಧ ಧ್ವನಿಯೆತ್ತುವ ಕಥಾವಸ್ತುವುಳ್ಳ ‘ಥೆಮಿಸ್ ‘ ಚಿತ್ರ ಆತ್ಮ ಅರ್ಥಾತ್ ಅತೀಂದ್ರಿಯ ಶಕ್ತಿಯನ್ನು ರೂಪಕವಾಗಿಟ್ಟು ಕೊಂಡು ನಿರ್ಮಾಣಗೊಳ್ಳುತ್ತಿರುವ ವಿಶಿಷ್ಟ ಚಿತ್ರವಾಗಿದ್ದು ಒಂದು ಒಳ್ಳೆ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆಂದು ಹೇಳಿದ ಅವರು ಈ ನಿಟ್ಟಿನಲ್ಲಿ ಚಿತ್ರತಂಡಕ್ಕೆ ಯಶಸ್ಸು ಸಿಗಲೆಂದು ಶುಭಹಾರೈಸಿದರು.
‘ಥೆಮಿಸ್’ ಗೆ ಕಥೆ ಚಿತ್ರಕಥೆ ರಚಿಸಿ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿ ರುವ ಚೇತನ್ ಹನ್ವಿತ್ ಅವರು ಮಾತನಾಡಿ, ಇದು ಪ್ರೀತಿ, ಪ್ರೇಮ, ಭಯಾನಕತೆ, ನಿಗೂಢತೆ ಮತ್ತು ರೋಮಾಂಚಕತೆ ಹಾಗು ಮಾನವೀಯತೆ ಒಳಗೊಂಡಿರುವ 8 ಭಾಗಗಳನ್ನು ಹೊಂದಿರುವ ವೆಬ್ ಸರಣಿಯಾಗಿದೆ. ಸಮಾಜದಲ್ಲಿ ತನ್ನ ಮೇಲೆ ನಡೆದ ಶೋಷಣೆ ವಿರುದ್ಧ ಓರ್ವ ಮಹಿಳೆ ನಡೆಸುವ ಹೋರಾಟವೇ ಈ ಚಿತ್ರದ ಪ್ರಮುಖ ಕಥಾವಸ್ತು.
ಆಕೆಗೆ ಕುಟುಂಬ, ಸಮಾಜ ನೆರವಿಗೆ ಬಾರದಿದ್ದರೂ ಒಂದು ಅತೀಂದ್ರಿಯ ಶಕ್ತಿ ಆಕೆಯ ಪರವಾಗಿ ಕೆಲಸ ಮಾಡುತ್ತದೆ. ಅದು ಯಾವುದು ಎಂಬುದೇ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಹೋಗುತ್ತದೆ. ‘ದೈವಂ ಮನುಷ್ಯ ರೂಪೇಣ’ ಎಂದು ನಾವೆಲ್ಲ ತಿಳಿದಿದ್ದೇವೆ. ಆದರೆ ‘ದೈವಂ ಆತ್ಮ ರೂಪೇಣ’ ಇರಬಹುದಾ? ಸಮಾಜದಲ್ಲಿ ಕೆಲವರಲ್ಲಿ ಮಾನವೀಯತೆ ಸತ್ತಾಗ ಒಂದು ಶಕ್ತಿಯ ಉಗಮವಾಗುತ್ತದೆ.ಅದೇ ‘ಥೆಮಿಸ್ ‘. ಇದು ವಾಸ್ತವ ಮೀರಿದ ನ್ಯಾಯ ಎಂಬ ಕಥಾಹಂದರವನ್ನು ಒಳಗೊಂಡ ಚಿತ್ರವಾಗಿದೆ. ‘ಥೆಮಿಸ್ ‘ ಎಂಬ ಈ ಹೆಸರು ನ್ಯಾಯದೇವತೆಯನ್ನು ಸಂಕೇತಿಸುವ ಗ್ರೀಕ್ ಪದ ಎಂದು ಹೇಳಿದರು.
ಇದೇ ವೇಳೆ ‘ಥಿಮಿಸ್’ ಚಿತ್ರದ ಪೋಸ್ಟರನ್ನು ಬಿಡುಗಡೆ ಮಾಡಿದ ಸಾಹಿತಿ ಬನ್ನೂರು ರಾಜು ಅವರನ್ನು ಚಿತ್ರತಂಡ ಸನ್ಮಾನಿಸಿ ಗೌರವಿಸಿತು.ಚಿತ್ರದ ಸಂಗೀತ ನಿರ್ದೇಶಕ ನೀತು ನಿನಾದ್, ಛಾಯಾಗ್ರಾಹಕ ಸಂತೋಷ್ ದಯಾಲನ್, ಸಹಾಯಕ ನಿರ್ದೇಶಕರಾದ ವಿಲಾಸ್ ಅರ್. ಹೊಸೂರು, ಭುವನ್ ಮಾಚಯ್ಯ ಮತ್ತು ಚಿತ್ರದ ಕಲಾವಿದರಾದ ಆರ್ಯನ್, ಗೌತಮ್, ಅಚ್ಚಪ್ಪ, ಸಾಗರ್, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.