ಮೈಸೂರು : ಈಗಾಗಲೇ ಕಾಂಗ್ರೆಸ್ನ ಸಖ್ಯ ಕಳೆದುಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ತಮ್ಮ ಆಕ್ರೋಶವನ್ನು ಹೊರಹಾಕುವುದರೊಂದಿಗೆ ಫೆ.14ರಂದು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸಂದೇಶ ರವಾನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.21ರಷ್ಟು ಮಂದಿ ಅಲ್ಪಸಂಖ್ಯಾತರಿದ್ದೇವೆ. ನಾವು ಇವರನ್ನು ಆಯ್ಕೆ ಮಾಡುವುದು. ಆದರೆ ಸ್ಥಾನ ಕೊಡುವಾಗ ಮಾತ್ರ ನಾವು ಇರುವುದಿಲ್ಲ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ನನ್ನ ಹೆಸರೇ ಶಿಫಾರಸ್ಸಾಗಿದ್ದರೂ, ರಾತ್ರೋ ರಾತ್ರಿ ಹೆಸರು ಬದಲಾಗಿದೆ. ಇಬ್ರಾಹಿಂಗೆ ಅನ್ಯಾಯವಾಗಿದೆ ಎಂದು ಗೊತ್ತಾದ ಕೂಡಲೇ ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ ಹೀರೋ ಆಗುತ್ತಿದ್ದರು. ಆದರೆ ಸಿದ್ದರಾಮಯ್ಯ ಹಾಗೆ ಮಾಡಲಿಲ್ಲ. ಕಾಂಗ್ರೆಸ್ನಲ್ಲಿ ಅವರು ಅಸಹಾಯಕರಾಗಿದ್ದಾರೆ. ಇನ್ನು ಅಲ್ಪಸಂಖ್ಯಾತರನ್ನು ಕಾಂಗ್ರೆಸ್ಗೆ ಮತ ಹಾಕುವ ಮಿಷನ್ ಎಂದುಕೊಂಡಿದ್ದಾರೆ. ಆಯ್ಕೆ ಮಾಡಲು ನಾವು ಬೇಕು. ಸ್ಥಾನಮಾನ ನೀಡುವಾಗ ನಾವು ಬೇಡವೆ ಎಂದು ಕೇಳಿದರು.
ಯು ಟಿ ಖಾದರ್ಗೆ ಉಪ ನಾಯಕ ಸ್ಥಾನ ನೀಡಿದ್ದಾರೆ. ಅಂದರೆ ಪ್ಯಾಂಟ್ ಅಲ್ಲ, ಚಡ್ಡಿ ಕೊಟ್ಟಿದ್ದಾರೆ ಏಕೆಂದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ರಾಜ್ಯದಿಂದ ಕಳುಹಿಸಿಕೊಟ್ಟ ಹೆಸರಿನವರನ್ನೇ ಮಾಡಿದ್ದೇವೆ ಎಂದಿದ್ದಾರೆ. ಆದರೆ ನನ್ನ ಹೆಸರೂ ಹೋಗಿತ್ತು. ರಾತ್ರೋರಾತ್ರಿ ಬದಲಾಗಿದ್ದು ಹೇಗೆ? ನಮಗೆ ಏಕೆ ಕೊಡಲಿಲ್ಲ ಎಂದು ಗೊತ್ತಿಲ್ಲ. ಒಂದು ನನ್ನ ಬಳಿ ಹಣಕಾಸು ಇಲ್ಲ. ಇನ್ನೊಂದು ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಕೊಡದಿರಬಹುದು. ಅಲ್ಪಸಂಖ್ಯಾತರು ಕಾಂಗ್ರೆಸ್ ಬಿಟ್ಟರೆ ಬಿಜೆಪಿಗೆ ವೋಟ್ ಹಾಕುವುದಿಲ್ಲ. ಕಾಂಗ್ರೆಸ್ಗೆ ವೋಟ್ ಹಾಕುತ್ತಾರೆ ಎಂಬ ಮನಸ್ಥಿತಿ ಇದೆ. ಹೀಗಾಗಿ ಖಾದರ್ಗೆ ಉಪ ನಾಯಕ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.
ಮಾತಿನುದ್ದಕ್ಕೂ ಸಿದ್ದರಾಮಯ್ಯರ ಮೇಲೆ ಹರಿಹಾಯ್ದ ಅವರು, ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆದಾಗ ನಾನು, ಎಚ್.ವಿಶ್ವನಾಥ್ ಮತ್ತು ರಮೇಶ್ಕುಮಾರ್ ಅವರು ಕ್ಷೀರಭಾಗ್ಯ, ಅನ್ನಭಾಗ್ಯ ಘೋಷಣೆ ಮಾಡುವಂತೆ ಸಲಹೆ ನೀಡಿದೆವು. ಬೇಕಿದ್ದರೆ ವಿಶ್ವನಾಥ್ ಜೀವಂತವಾಗಿದ್ದಾರೆ, ಕೇಳಿಕೊಳ್ಳಲಿ. ನಾವು ಹಿನ್ನೆಲೆ ಗಾಯಕರು, ಅವರು ಮುಂಚೂಣಿ ಗಾಯಕರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದೆವು. ಅಂದು ಕೈಬಿಟ್ಟಿದ್ದರೆ ಸಿದ್ದರಾಮಯ್ಯ ಕತೆ ಮುಗಿದೇ ಹೋಗುತ್ತಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋಲುತ್ತೀರಿ ಬೇಡ ಎಂದೆವು. ಆದರೆ 30ರಿಂದ 40 ಸಾವಿರ ಮತಗಳಿಂದ ಗೆಲ್ಲುವುದಾಗಿ ವಾದಿಸಿದರು. ನಾವು ಅವರನ್ನು ಹೊತ್ತೊಯ್ದು ಬಾದಾಮಿಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದಾಗಿ ಹೇಳಿದರು.