ಮೈಸೂರು: ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿರುವ ರೈತರಿಗೆ ಇದೀಗ ಕಾಡಾನೆ ಮಾತ್ರವಲ್ಲ ಕಾಡುಹಂದಿಗಳ ಕಾಟ ಆರಂಭವಾಗಿದ್ದು, ರಾತ್ರಿ ಹಗಲು ಎನ್ನದೆ ಜಮೀನಿಗೆ ನುಗ್ಗಿ ಫಸಲುಗಳನ್ನು ನಾಶ ಮಾಡುತ್ತಿವೆ ಎಂದು ಕಾಡಂಚಿನ ಗ್ರಾಮಗಳ ರೈತರು ಅಳಲು ತೋಡಿಕೊಂಡಿದ್ದಾರೆ.
ನಾಗರಹೊಳೆ ಕಾಡಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಬಿ.ಆರ್ ಕಾವಲು 2ನೇ ಕಾಲೋನಿ ಗ್ರಾಮದ ಸ್ವಾಮಿ ಎಂಬುವರಿಗೆ ಸೇರಿದ ಜಮೀನಿಗೆ ನುಗ್ಗಿದ ಕಾಡುಹಂದಿಗಳು ಮುಸುಕಿನ ಜೋಳ ಬೆಳೆಯನ್ನು ನಾಶಪಡಿಸಿವೆ. ಸ್ವಾಮಿ ಅವರು ಬೆಳೆದಿದ್ದ ಮುಸುಕಿನ ಜೋಳ ಸಮೃದ್ಧವಾಗಿ ಬೆಳೆದಿತ್ತು. ಆದರೆ ಕಾಡುಹಂದಿಯ ದಾಳಿಯ ಪರಿಣಾಮ ಸಾವಿರಾರು ರೂ. ಮೌಲ್ಯದ ಜೋಳ ನಾಶವಾಗಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಕಾಡು ಪ್ರಾಣಿಗಳ ದಾಳಿಗೆ ಒಳಗಾಯಿತಲ್ಲ ಎಂದು ರೈತರು ಚಿಂತಾ ಕ್ರಾಂತರಾಗಿದ್ದಾರೆ. ಬೆಳೆ ನಾಶ ಹೊಂದಿರುವ ರೈತ ಸ್ವಾಮಿ ಯವರಿಗೆ ಬೆಳೆ ನಷ್ಟದ ಅಂದಾಜನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡುಹಂದಿಗಳ ಹಾವಳಿ ಕುರಿತಂತೆ ಮಾತನಾಡಿರುವ ತಾ.ಪಂ.ಮಾಜಿ ಸದಸ್ಯೆ ರೂಪ ನಂದೀಶ್ ಅವರು,ಬಿ.ಆರ್ ಕಾವಲ್ ಗ್ರಾಮ ಸೇರಿದಂತೆ ಹನಗೋಡು ಭಾಗದ ಸುತ್ತಮುತ್ತಲ ಗ್ರಾಮಗಳು ಕಾಡಂಚಿಗೆ ಹೊಂದಿಕೊಂಡಿದ್ದು, ರಾತ್ರಿಯಾದರೆ ನೇರವಾಗಿ ಜಮೀನಿಗೆ ಕಾಡು ಪ್ರಾಣಿಗಳು ಲಗ್ಗೆಯಿಡುತ್ತವೆ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗಳು ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಿವೆ. ಕೂಡಲೇ ಅರಣ್ಯ ಇಲಾಖೆಯವರು ಕಾಡುಹಂದಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.