ಮೈಸೂರು: ರೈತರ ಆತ್ಮಹತ್ಯೆ ಪ್ರಕರಣಗಳು ಮರುಕಳಿಸಿದ್ದು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಪ್ರಕರಣಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ. ಇದೀಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೂರಗಲ್ಲು ಗ್ರಾಮದಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೂರಗಲ್ಲು ಗ್ರಾಮದ ರೈತ ಮಂಜು (40) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಜಮೀನಿನಲ್ಲಿ ಶುಂಠಿ ಮತ್ತು ಹೊಗೆಸೊಪ್ಪಿನ ವ್ಯವಸಾಯ ಮಾಡುತ್ತಿದ್ದರು. ಕೃಷಿ ಮಾಡುವ ಸಲುವಾಗಿ ಇವರು ಬಾರಸೆ ಸಹಕಾರ ಬ್ಯಾಂಕಿನಲ್ಲಿ 75 ಸಾವಿರ ಹಾಗೂ ವಿವಿಧ ಸ್ವಸಹಾಯ ಸಂಘಗಳಲ್ಲಿ 2 ಲಕ್ಷ ರೂ ಸಾಲ ಮಾಡಿದ್ದರು, ಕಳೆದ 2 ವರ್ಷಗಳಿಂದ ವ್ಯವಸಾಯದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಸಂಕಷ್ಟ ಅನುಭವಿಸಿದ್ದರು.
ಸಾಲಗಾರರ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಮತ್ತು ಸಾಲ ತೀರಿಸಲು ಯಾವುದೇ ಆದಾಯದ ಮೂಲವೂ ಇಲ್ಲದ ಕಾರಣ ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದು ಮನೆಯವರು ಕೂಡಲೇ ಅವರನ್ನು ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ಅಸ್ವಸ್ಥಗೊಂಡ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತ ರೈತನ ಬಾಮೈದ ಮಹದೇವ್ ಎಂಬುವರು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.