ಮೈಸೂರು : ತಾಂತ್ರಿಕ ತೊಂದರೆಯಿಂದಾಗಿ ಶಾಲಾ ಬಸ್ವೊಂದು ಹೊತ್ತು ಉರಿದ ಘಟನೆ ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ನಡೆದಿದ್ದು ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಖಾಸಗಿ ಶಾಲೆಗೆ ಸೇರಿದ ಬಸ್ ಇದಾಗಿದ್ದು, ಬೆಳಿಗ್ಗೆ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದೊಯ್ದ ಬಳಿಕ ಶಾಲಾ ಆವರಣದಲ್ಲಿ ಸುಮಾರು ಐದು ಬಸ್ ಗಳನ್ನು ನಿಲ್ಲಿಸಲಾಗಿತ್ತು. ಹೀಗೆ ನಿಂತಿದ್ದ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ದಟ್ಟವಾದ ಹೊಗೆ ಹೊರಬಂದಿದೆ. ತಕ್ಷಣ ಸ್ಥಳದಲ್ಲಿದ್ದವರು ನೀರನ್ನು ಹಾಕಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದರಿಂದ ಬೆಂಕಿಯ ಕೆನ್ನಾಲಿಗೆ ಇತರೆ ಬಸ್ ಗಳಿಗೆ ಹರಡದೆ ಭಾರೀ ಅನಾಹುತವನ್ನು ತಪ್ಪಿಸಲಾಗಿದೆ.
ಮೇಲ್ನೋಟಕ್ಕೆ ತಾಂತ್ರಿಕ ಕಾರಣದಿಂದ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದ್ದರೂ ಪೊಲೀಸರ ತನಿಖೆ ಬಳಿಕ ನಿಜ ವಿಷಯ ಗೊತ್ತಾಗಬೇಕಾಗಿದೆ. ಶಾಲಾ ಮಕ್ಕಳನ್ನು ಕೆಳಗಿಳಿಸಿ ಚಾಲಕ ಶಾಲೆಯೊಳಗೆ ಹೋದ ಕೆಲವೇ ಕ್ಷಣದಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಇದನ್ನು ನೋಡಿದ ಸುತ್ತ ಮುತ್ತಲ ಜನರು ಶಾಲಾ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿಗೆ ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದು ಅದೇ ವೇಳೆ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಿಂದ ಶಾಲೆಗೆ ಮಕ್ಕಳನ್ನು ಬಸ್ ನಲ್ಲಿ ಕಳುಹಿಸುವ ಪೋಷಕರು ಆತಂಕಗೊಂಡಿದ್ದಾರೆ.