ಮೈಸೂರು ;ಮೈಸೂರಿನಲ್ಲಿ ಅಪರಾಧ ಕೃತ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಖತರ್ನಾಕ್ ಖದೀಮರ ಕಳ್ಳತನದ ಕೈಚಳಕ ಮುಂದುವರೆದಿದೆ. ನಿನ್ನೆಯಷ್ಟೆ ಹಾಡು ಹಗಲೇ ನಗರದ ವಿದ್ಯಾರಣ್ಯಪುರಂನ ಚಿನ್ನದಂಗಡಿ ದರೋಡೆ ಮಾಡಿದ್ದ ಕಳ್ಳರು ಸಿಕ್ಕಿ ಬೀಳುವ ಭಯದಲ್ಲಿ ಅಮಾಯಕ ಯುವಕನೊಬ್ಬನಿಗೆ ಗುಂಡು ಹಾರಿಸಿದ್ದರು ಇದರಿಂದ ಯುವಕ ಸಾವನ್ನಪ್ಪಿದ್ದ. ಏತನ್ಮಧ್ಯೆ ಮೈಸೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಖತರ್ನಾಕ್ ಖದೀಮರು ಸ್ಟೀಲ್ ಅಂಗಡಿಯಲ್ಲಿ ಕಳ್ಳತನ ಮಾಡಿ, ಸಾಕ್ಷಿ ನಾಶ ಮಾಡಿರುವ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರೋಡ್ ಬಳಿ ನಡೆದಿದೆ. ಇಲ್ಲಿನ ಶ್ರೀನಿವಾಸ ಸ್ಟೀಲ್ ಮತ್ತು ಹಾರ್ಡ್ ವೇರ್ ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಅಂಗಡಿಯ ರೋಲಿಂಗ್ ಶೆಟ್ಟರ್ ಮೀಟಿ ಒಳ ನುಗ್ಗಿರುವ ಕಳ್ಳರು ನಗದು, ಕಂಪ್ಯೂಟರ್ ಸಿಸ್ಟಂ ಸೇರಿದಂತೆ ಕೆಲವು ವಸ್ತುಗಳನ್ನು ದೋಚಿದ್ದಾರೆ. ಇದೇ ವೇಳೆ ಪೋಲಿಸರಿಗೆ ಸಿಕ್ಕಿ ಬೀಳಬಾರದೆಂದು ಕಳ್ಳರು ಸಿಸಿಟಿವಿಯ ಹಾರ್ಡ್ ಡಿಸ್ಕ್ ಮತ್ತು ಮಾನಿಟರ್ ನ್ನು ಹೊತ್ತೊಯ್ದಿದ್ದಾರೆ. ಅಲ್ಲದೆ ಕಳ್ಳರು ಸಿಸಿಟಿವಿ ಕ್ಯಾಮರಾವನ್ನೂ ಒಡೆದು ಹಾಕಿದ್ದು, ಈ ಕುರಿತು ಮೈಸೂರಿನ ಕುವೆಂಪುನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.