ಮೈಸೂರು: ನಮಗೆ ರಿವರ್ಸ್ ಆಪರೇಷನ್ ಬೇಕಾಗಿಲ್ಲ. ಕಾಂಗ್ರೆಸ್ ನಲ್ಲಿ ನಡೆಯುತಿರೋ ತಿಕ್ಕಾಟ ನೋಡಿ, ಮುಂದೆ ನಮ್ಮ ಕಡೆ ಅನೇಕ ನಾಯಕರು ಬರುತ್ತಾರೆ. ಕೊನೆ ಗಳಿಗೆಯಲ್ಲಿ ಪಕ್ಷಕ್ಕೆ ಬರುವ ನಾಯಕರಿಗೆ ಅವರದ್ದೇ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಜೆಡಿಎಸ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ರೀತಿಯ ಪ್ರಕ್ರಿಯೆಗಳು ಇನ್ನೂ ನಡೆಯುತ್ತಲೇ ಇವೆ.ನಮ್ಮಲ್ಲೂ ಇಂಟೆಲಿಜೆನ್ಸ್ ರಿಪೋರ್ಟ್ ಇದೆ. ಯರ್ಯಾರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ. ಅಧಿಕಾರಕ್ಕೆ ಬರಲು ಅವರಿವರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಾವು ನಮ್ಮ ಎಲ್ಲ ಶಾಸಕರನ್ನು ಪ್ರೀತಿಯಿಂದ ಕಂಡಿದ್ದೇವೆ. ಪಕ್ಷದ ಶಾಸಕರು, ನಾಯಕರನ್ನ ಪ್ರೀತಿಯಿಂದ ಕಂಡಿದ್ದೇವೆ. ಇದು ಫ್ರೀಡಂ ಇರುವ ಪಕ್ಷ, ಆದರೆ ಇದರ ಹೊರತಾಗಿ ಬೇರೆಯವರ ಜೊತೆ ಕೆಲವು ಮಾತುಕತೆ ನಡೆಸುತ್ತಾರೆ. ಇವೆಲ್ಲವೂ ಸಾಮಾನ್ಯ ಎಂದು ಡಿ.ಕೆ.ಶಿವಕುಮಾರ್ಗೆ ಟಾಂಗ್ ನೀಡಿದರು.
ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದರೆ ಡಿಕೆ.ಶಿವಕುಮಾರ್ರ ಕುತ್ತಿಗೆಗೆ ಬರುತ್ತೆ. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಬದುಕಿರೋವರೆಗೂ ಒಕ್ಕಲಿಗ ಸಮಾಜ ಅವರನ್ನ ಕೈಬಿಡಲ್ಲ. ಡಿಕೆ.ಶಿವಕುಮಾರ್ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ. ಇನ್ಯಾರನ್ನದರೂ ಸೆಳೆಯಲಿ ನಾವು ತಲೆಕೆಡಿಸಿಕೊಳ್ಳಲ್ಲ. ಹೆಚ್.ಡಿ.ದೇವೆಗೌಡರು ಇರೋವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಗೆ ಬರಲಿದೆ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ ಬೆಳವಣಿಗೆ ನೋಡಿ ಆ ಪಕ್ಷದವರೇ ಬರ್ತಾರೆ ಎಂದು ತಿರುಗೇಟು ನೀಡಿದರು.