News Kannada
Saturday, September 23 2023
ಮೈಸೂರು

ಕಾಡಾನೆ ಹಾವಳಿ ತಡೆಗೆ ರೋಪ್ ಬ್ಯಾರಿಯರ್: ಉಮೇಶ್ ಕತ್ತಿ

elephant 1
Photo Credit : By Author

ಮೈಸೂರು: ನಾಗರಹೊಳೆ, ಬಂಡೀಪುರ, ಹಾಸನದಲ್ಲಿ ಕಾಡಾನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಪ್ಪಿಸಲು ವಿನೂತನ ಮಾದರಿಯ ರೋಪ್ ಬ್ಯಾರಿಯರ್ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ನಾಗರಹೊಳೆ ಉದ್ಯಾನದ ವೀರನಹೊಸಳ್ಳಿ ವನ್ಯಜೀವಿ ವಲಯದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಲಾಗುತ್ತಿರುವ ರೋಪ್ ಬ್ಯಾರಿಯರ್ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾಹಿತಿ ನೀಡಿದ ಅವರು ಈ ಬಾರಿ ಇದೇ ಮಾದರಿ 50 ಕಿಮೀ ಬ್ಯಾರಿಯರ್ ನಿರ್ಮಿಸಲಾಗುವುದು. ನಾಗರಹೊಳೆ ಉದ್ಯಾನದಲ್ಲಿ 4.5ಕಿ.ಮೀ. ನಿರ್ಮಿಸಲಾಗುತ್ತಿದೆ. ಪ್ರತಿ ಕಿ.ಮೀ.ಗೆ 60ಲಕ್ಷ ರೂ ವೆಚ್ಚವಾಗಲಿದೆ. ಇದರಿಂದ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲು 1.5 ಕೋಟಿ ರೂ ವೆಚ್ಚವಾಗುತ್ತಿತ್ತು. ಇದೀಗ ರೈಲ್ವೆ ಹಳಿ ಸಿಗುತ್ತಿಲ್ಲ, ವೆಚ್ಚವು ಸಹ ದುಬಾರಿಯಾಗಿದ್ದರಿಂದ, ಹೊಸ ಮಾದರಿಯ ರೋಪ್ ಬ್ಯಾರಿಯರ್ ನಿರ್ಮಿಸಲಾಗುತ್ತಿದೆ.

ರೋಪ್ ಬ್ಯಾರಿಯರ್‌ಯನ್ನು ಈಗಾಗಲೇ ತಮಿಳುನಾಡಿನ ಹೊಸೂರಿನ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿರುವುದನ್ನು ಪರಿಶೀಲಿಸಿದ್ದೇನೆ. ಅಲ್ಲಿ ಕಾಡಾನೆಗಳ ಹಾವಳಿ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣಗೊಂಡಿದೆ. ಹೀಗಾಗಿ ಇಲ್ಲಿಯೂ ರೋಪ್ ಬ್ಯಾರಿಯರ್ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಅರಣ್ಯದಂಚಿನಲ್ಲಿ 600ಕಿ.ಮೀ ತಡೆ ಗೋಡೆ ನಿರ್ಮಿಸಬೇಕಿದ್ದು, ಈಗಾಗಲೇ 200 ಕಿ.ಮೀ.ನಷ್ಟು ರೈಲ್ವೆ ಹಳಿ ತಡೆ ಗೋಡೆ ನಿರ್ಮಿಸಲಾಗಿದೆ. ಇದೀಗ ಕಡಿಮೆ ವೆಚ್ಚದ ರೋಪ್ ಬ್ಯಾರಿಯರ್ ಯಶಸ್ವಿಯಾದಲ್ಲಿ ಮುಂದೆ ಎಲ್ಲೆಡೆ ಇದೇ ಮಾದರಿಯ ತಡೆಗೋಡೆ ನಿರ್ಮಿಸಲು ಕ್ರಮವಹಿಸಲಾಗುವುದೆಂದರು. ರಾತ್ರಿ ವೇಳೆ ಕಾಡಾನೆ ಹಾವಳಿ ತಡೆಯಲು ಸಿಬ್ಬಂದಿಗಳ ಕೊರತೆ ಇದೆ ವಿಶೇಷ ಕಾವಲುಗಾರರನ್ನು ನೇಮಿಸಿದಲ್ಲಿ ಅನುಕೂಲವಾಗಲಿದೆ ಎಂಬ ಪ್ರಶ್ನೆಗೆ ಈಗಾಗಲೇ ಸಾಕಷ್ಟು ಸಿಬ್ಬಂದಿ ನೇಮಿಸಲಾಗಿದೆ. ಇಲಾಖೆಗೆ ಪ್ರತಿವರ್ಷ ಶೇ.20ರಷ್ಟು ಸಿಬ್ಬಂದಿಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದರು.

ರೈಲ್ವೆ ಹಳಿ ತಡೆಗೋಡೆ ನಿರ್ವಹಣೆಯಿಲ್ಲದೆ ಅಳವಡಿಸಿರುವ ಕಳಪೆ ಬೋಲ್ಟ್‌ಗಳು ಕಳಚಿಬೀಳುತ್ತಿದ್ದು, ಆನೆಗಳು ಸರಾಗವಾಗಿ ಹೊರದಾಟುತ್ತಿವೆ ಎಂಬ ಪ್ರಶ್ನೆಗೆ ಮುಂದೆ ಗುಣಮಟ್ಟದ ಬೋಲ್ಟ್‌ಗಳನ್ನು ಅಳವಡಿಸಿ ಇಲಾಖೆ ವತಿಯಿಂದಲೇ ನಿರ್ವಹಣೆ ಮಾಡಲಾಗುವುದೆಂದು ಡಿಸಿಎಫ್ ತಿಳಿಸಿದರು. ಮುಂದೆ ಈ ರೀತಿ ಕಾಮಗಾರಿ ವಹಿಸಿಕೊಂಡವರೇ ಮುಂದೆ ಐದು ವರ್ಷಗಳ ಕಾಲ ನಿರ್ವಹಣೆ ಮಾಡುವಂತೆ ಕ್ರಮವಹಿಸಲಾಗಿದೆ ಎಂದರು. ವನ್ಯಜೀವಿ ಹಾವಳಿಯಿಂದ ಹಾನಿಯಾಗುವ ಬೆಳೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಪರಿಹಾರ ಹೆಚ್ಚಿಸಬೇಕೆಂಬ ರೈತರ ಬೇಡಿಕೆಗೆ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದರು.

ಪಶ್ಚಿಮಘಟ್ಟಗಳ ಹಸಿರುವಲಯ ಸಂರಕ್ಷಣೆಗಾಗಿ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರಬಾರದೆಂದು ಶಾಸಕರಾದ ಮಂಜುನಾಥ ಮತ್ತು ಅನಿಲ್‌ಚಿಕ್ಕಮಾದು ರವರ ಒತ್ತಾಯಕ್ಕೆ ರಾಜ್ಯ ಸರಕಾರ ಈಗಾಗಲೇ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದ್ದು, ಜಾರಿಗೆ ಕ್ರಮವಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.

ಇದೇ ವೇಳೆ ನೂತನವಾಗಿ ಅನುಷ್ಠಾನಗೊಳಿಸುತ್ತಿರುವ ರೋಪ್ ಬ್ಯಾರಿಯರ್‌ಗೆ ಅಳವಡಿಸಿರುವ ಸಿಮೆಂಟ್ ಕಂಬ ಹಾಗೂ ಉಕ್ಕಿನ ಹಗ್ಗದ ಸಾಮರ್ಥ್ಯವನ್ನು ಸಾಕಾನೆ ಭೀಮನಿಂದ ನೂಕಿಸಿ ಸಚಿವ-ಶಾಸಕರ ಸಮ್ಮುಖದಲ್ಲೇ ಗುಣಮಟ್ಟವನ್ನು ಪರಿಶೀಲಿಸಲಾಯಿತು.

See also  ಜಿ. ಪರಮೇಶ್ವರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಸಿದ್ದರಾಮಯ್ಯ: ಪ್ರತಾಪ್ ಸಿಂಹ

ಈ ವೇಳೆ ಎಪಿಸಿಸಿಎಫ್ ಜಗತ್‌ರಾಮ್, ಕೊಡಗು ಸಿಎಫ್ ಡಿ.ಎನ್.ಡಿ ಮೂರ್ತಿ, ಡಿಸಿಎಫ್‌ಗಳಾದ ಮಹೇಶ್‌ಕುಮಾರ್, ಸೀಮಾ, ಎಸಿಎಫ್ ಸತೀಶ್ ಹಾಗೂ ಆರ್.ಎಫ್.ಒ ಸಿಬ್ಬಂದಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು