ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಇಂದು ದಸರಾ ಗಜಪಡೆ ಪೂಜೆ ಸಲ್ಲಿಸುವ ವೇಳೆ ಅರಣ್ಯ ಸಚಿವ ಉಮೇಶ್ ಕತ್ತಿ ಎಡವಟ್ಟು ಮಾಡಿದ್ದಾರೆ.
ಪೂಜೆ ಸಲ್ಲಿಸುವ ವೇಳೆ ಶೂ ಧರಿಸಿಯೇ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಸಮಯದಲ್ಲಿ ಇತರೆ ಗಣ್ಯರು ಬರಿಗಾಲಲ್ಲಿ ಪೂಜೆ ಸಲ್ಲಿಸಿದರೆ, ಉಮೇಶ್ ಕತ್ತಿ ಮಾತ್ರ ಶೂ ಧರಿಸಿದ್ದರು.
ಸಂಪ್ರದಾಯವಾಗಿ ಪೂಜೆ ಸಲ್ಲಿಸುವಾಗ ಚಪ್ಪಲಿ, ಶೂ ಧರಿಸುವುದಿಲ್ಲ. ಆದ್ರೆ ಉಮೇಶ್ ಕತ್ತಿ ಎಲ್ಲವನ್ನೂ ಗಾಳಿಗೆ ತೂರಿ ಶೂ ಧರಿಸಿ ಪೂಜೆ ಸಲ್ಲಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ನಾಡಹಬ್ಬ ದಸರಾ ಗಜಪಯಣಕ್ಕೆ ಚಾಲನೆ:
ನಾಡಹಬ್ಬ ಮೈಸೂರು ದಸರಾಗೆ ಮುನ್ನುಡಿಯಾ ಗಜಪಯಣಕ್ಕೆ ಭಾನುವಾರ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು.
ವೀರನಹೊಸಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 9.01ರಿಂದ 9.35ರ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆಪೂಜೆ ಸಲ್ಲಿಸುವುದರ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.