ಮೈಸೂರು: ಶ್ರೀ ಭಕ್ತ ಕನಕದಾಸರ 535 ನೇ ಜಯಂತಿ ಅಂಗವಾಗಿ ಕೃಷ್ಣರಾಜ ಯುವ ಬಳಗದ ವತಿಯಿಂದ ಕನಕ ವೃತ್ತ (ನಂಜುಮಳಿಗೆ) ವೃತ್ತದಲ್ಲಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುರುಬ ಸಮುದಾಯದವರಿಗೆ ಉಚಿತವಾಗಿ ಕುರಿ ಮರಿಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕೃಷ್ಣರಾಜ ಯುವ ಬಳಗದ ಯುವಕರು ಸರ್ಕಾರದ ಮಾದರಿಯಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ, ಇದೊಂದು ಸಾಹಸದ ಕೆಲಸ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಗಿ ತರಲು ಪ್ರಯತ್ನಿಸಿದ್ದಾರೆ ಎಂದರು, ಕುರಿ ಸಾಕಣೆ ಲಾಭ ತರುವ ಉದ್ಯಮವಾಗಿತ್ತು ಆದರೆ, ನಾಗರಕರಣದಿಂದ ಕುರಿ ಸಾಕಣೆ ನಶಿಸಿ ಹೋಗುತ್ತಿದೆ, ಕುರಿಗಳಿಗೆ ಬೇಡಿಕೆ ಇದೆ ಆದರೆ, ಸಾಕಲು ಸಿದ್ದರಿಲ್ಲ, ಕುರಿ ಸಾಕಣೆಯಿಂದ ಉದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ ಎಂದು ತಿಳಿಸಿದರು,
ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಮಾತನಾಡಿ, ಕನಕದಾಸರು ಯಾವುದೇ ಜಾತಿಗೆ ಸೀಮಿತವಲ್ಲ, ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಮೂಲಕ ಆ ಕಾಲದಲ್ಲಿಯೇ ಜಾತಿ ಸಂಘರ್ಷಕ್ಕೆ ವಿರುದ್ಧವಾಗಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು. ಭಕ್ತಿ ಪರಂಪರೆ ಕಾಲದಲ್ಲಿ ಅವರು ಎದುರಿಸಿದ ಸಂಕಷ್ಟಕ್ಕೆ ಬದಲಾಗಿ ತಮ್ಮ ವೈಚಾರಿಕ, ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ನೀಡಿದರು ಎಂದರು.
ಭೂಮಿ ಅಗೆಯುತ್ತಿದ್ದಾಗ ಕನಕನಿಗೆ ಸಿಕ್ಕ ನಿಧಿಯನ್ನು ತಾನು ಬಳಸದೆ ಬಡವರ ಉದ್ಧಾರಕ್ಕೆ, ದೇವಸ್ಥಾನ ಜೀರ್ಣೋದ್ಧಾರ ಹೀಗೆ ಸಮಾಜಮುಖಿ ಕೆಲಸಕ್ಕೆ ನೀಡಿದರು. ಕೀರ್ತನೆ, ಕಾವ್ಯದ ಮೂಲಕ ಜನರ ಅಜ್ಞಾನ ಹೋಗಲಾಡಿಸುವ ಕೆಲಸ ಮಾಡಿದರು. ವ್ಯಾಸರಾಯರ ಶಿಷ್ಯನಾಗಿ ಅವರ ಮನಗೆದ್ದ ಹಲವು ಘಟನೆ ಇಂದಿಗೂ ಕಥೆಯಾಗಿ ಜನಪ್ರಿಯವಾಗಿವೆ. ಕನಕದಾಸರ ಜೀವನ ಎಲ್ಲರೂ ಅನುಸರಿಸುವಂತದ್ದು, ಅವರ ಜೀವನ ಓದಿ ತಿಳಿದು ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ನಗರಪಾಲಿಕೆ ಸದಸ್ಯರಾದ ಗೋಪಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಉದ್ಯಮಿ ಆರ್ ಕೆ ಕಾರ್ಸ್ ಮಾಲೀಕರಾದ ರವಿ, ಕೃಷ್ಣರಾಜ ಯುವ ಬಳಗ ಅಧ್ಯಕ್ಷರಾದ ನವೀನ್ ಕೆಂಪಿ, ಮಂಜುನಾಥ್, ಜೋಗಿ ದೀಪು, ತೀರ್ಥ ಕುಮಾರ್, ಮಂಜಣ್ಣ, ಪ್ರೇಮ್ ಕುಮಾರ್, ಪುರುಷೋತ್ತಮ್, ಮಂಜುನಾಥ್, ಚಂದ್ರಶೇಖರ್, ಬಸವರಾಜು, ಇನ್ನಿತರರು ಹಾಜರಿದ್ದರು.