ಮೈಸೂರು: ಭಾರತೀಯರಾದ ನಾವೇ ಭಾರತೀಯತೆಯ ಬಗ್ಗೆ ಚರ್ಚೆ ಮಾಡಬೇಕಾದ ದುಸ್ಥಿತಿ ಬಂದಿರುವುದು ಬೇಸರದ ಸಂಗತಿ ಎಂದು ರಂಗಕರ್ಮಿ ಎಸ್.ಎನ್.ಸೇತುರಾಂ ಹೇಳಿದರು.
ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಶನಿವಾರ ಆರಂಭಗೊಂಡ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕಟ್ಟುವುದು ಭಾರತೀಯ ಸಂಸ್ಕೃತಿಯೇ ಹೊರತು ಒಡೆಯುವುದಲ್ಲ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಕಲ್ಲು ಹೊಡೆಯುವವರು, ಪ್ರತಿಭಟಿಸುವವರನ್ನು ಹಲವರು ಬೆಂಬಲಿಸುತ್ತಿದ್ದಾರೆ. ನಮ್ಮ ಮನೆಯನ್ನು ಒಡೆಯಲು ಮುಂದಾದವರನ್ನು ಸಹಿಸಿಕೊಳ್ಳಬೇಕೆ ಎಂದು ಪ್ರಶ್ನಿಸಿದರು.
ಹೊಲಸು ನೀರು ಎಂದಿಗೂ ಶುದ್ಧವಾಗದು. ಹೀಗಾಗಿ ನಾವು ವೈಯಕ್ತಿಕವಾಗಿ ಸ್ವಚ್ಛ ನದಿಯಾಗಬೇಕು. ಹೊಲಸು ನೀರನ್ನು ಕೊಚ್ಚಿಹಾಕಬೇಕು. ದೇಶದ ಜನರು ಯಾರ ಮೇಲೂ ದಂಡೆತ್ತಿ ಹೋಗಲಿಲ್ಲ. ಕಾರಣ ಸಂಸ್ಕೃತಿ, ಸಂಪನ್ಮೂಲ ಇಲ್ಲಿಯೇ ಇತ್ತಲ್ಲವೇ ಎಂದರು.
ಒಲೈಕೆ ರಾಜಕಾರಣದಿಂದ ಭಾರತೀಯತೆ ಚದುರಿ ಹೋಗಿದೆ. ಬಹುಮತದಿಂದ ಆಯ್ಕೆಯಾದವರನ್ನು ಟೀಕಿಸುವುದೇ ಕೆಲವರ ಪ್ರವೃತ್ತಿಯಾಗಿದೆ. ಜ್ಞಾನ, ವಿವೇಕ ಹೆಚ್ಚಿದ್ದರೆ ತರ್ಕ ಇರುತ್ತದೆ. ಎರಡೂ ಇಲ್ಲದವರೂ ವಾದಕ್ಕೆ ಕುಳಿತಿದ್ದಾರೆ. ರಾಮಾಯಣ, ಮಹಾಭಾರತವನ್ನು ಕಾವ್ಯವಾಗಿ ನೋಡುತ್ತಿಲ್ಲ. ಅಲ್ಲಿನ ಪಾತ್ರಗಳನ್ನು ಟೀಕಿಸುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ವಿಚಾರ ಸಂಕಿರಣ ಉದ್ಘಾಟಿಸಿದ ಲೇಖಕಿ ಡಾ.ಎಸ್.ಆರ್.ಲೀಲಾ ಮಾತನಾಡಿ, ಭಾರತೀಯ ರಂಗಕಲೆಯಲ್ಲಿ ಸಂಗೀತ, ಗಾನ ಮತ್ತು ನೃತ್ಯಕ್ಕೆ ಮಹತ್ವದ ಸ್ಥಾನವಿದೆ. ಬ್ರಿಟಿಷರು ಬಂದ ನಂತರ ವಾಚನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿತು. ಆದರೂ, ಇಂದಿನ ಸಿನಿಮಾದಲ್ಲಿ ಗಾನ ಹಾಗೂ ನೃತ್ಯ ಉಳಿದುಕೊಂಡಿದೆ. ಅದಕ್ಕೆ ಕಾರಣ ನಮ್ಮ ಪರಂಪರೆ ಎಂದರು.
ಸಂಕಿರಣದ ಸಂಚಾಲಕ ಎಸ್.ರಾಮನಾಥ, ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗೋತ್ಸವ ಸಂಚಾಲಕ ಜಗದೀಶ್ ಮನೆವಾರ್ತೆ ಇದ್ದರು.