ಮೈಸೂರು: ಮಹನೀಯರ ಜಯಂತಿಗಳು ಆಚರಣೆಗಷ್ಟೆ ಸೀಮಿತವಾಗದೆ ಅವರ ಆದರ್ಶ ತತ್ವಗಳನ್ನು ನಾವು ಮೈಗೂಡಿಸಿಕೊಂಡು ಅರ್ಥಪೂರ್ಣಗೊಳಿಸಿ, ಜೀವನ ಸಾರ್ಥಕತೆಗಾಗಿ ಸಮಾಜದ ಒಳಿತಿಗೆ ಶ್ರಮಿಸುವ ಮೂಲಕ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮೈಲಾಕ್ ಅಧ್ಯಕ್ಷ ಆರ್ ರಘು ಕೌಟಿಲ್ಯ ಹೇಳಿದರು.
ಮೈಸೂರು ನಗರದ ಡಿ ದೇವರಾಜ ಅರಸು ರಸ್ತೆಯಲ್ಲಿ ಶ್ರೀ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ರವರ 297 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ‘ತ್ರಿಕಾಲ ಜ್ಞಾನಿಯಾಗಿದ್ದ ಕೈವಾರ ತಾತಯ್ಯ ಅವರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು ಮನುಕುಲದ ಒಳಿತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ.
17ನೇ ಶತಮಾನದಲ್ಲಿ ಜೀವಿಸಿದ್ದ ಕೈವಾರ ತಾತಯ್ಯ ಅವರು ಪವಾಡ ಪುರುಷರಾಗಿದ್ದರು. ತಾತಯ್ಯ ಅವರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲ ಸಮಾಜಗಳು ಸ್ಮರಿಸಿಕೊಳ್ಳಬೇಕಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ತಾರತಮ್ಯ, ಅಸಮಾನತೆ ಹೋಗಲಾಡಿಸಲು ತಾತಯ್ಯರು ಕೈಗೊಂಡ ಸಾಮಾಜಿಕ ಸುಧಾರಣೆ ಕಾರ್ಯ ಇಂದಿಗೂ ಮಾದರಿ’. ದೇಶದ ಅಭ್ಯುದಯಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಸ್ಮರಣೆ ಭಾರತದ ಪರಂಪರೆ. ಸಮಾಜದ ಶ್ರೇಯೋಭಿವೃದ್ಧಿಗೆ ದುಡಿದವರು ಇತಿಹಾಸ ಸೃಷ್ಟಿ ಸುತ್ತಾರೆ. ಅಂತಹ ಶ್ರೇಷ್ಠ ದಾರ್ಶನಿಕರಲ್ಲಿ ತಾತಯ್ಯ ಅಗ್ರಗಣ್ಯರು. ಕಾಲಜ್ಞಾನ ಭವಿಷ್ಯವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಕೈವಾರ ತಾತಯ್ಯ ಎಂದು ಬಣ್ಣಿಸಿದರು.
ಕಾಂಗ್ರೆಸ್ ಮುಖಂಡರಾದ ಹರೀಶ್ ಗೌಡ ಮಾತನಾಡಿ,‘ತಾತಯ್ಯ ಅವರು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕೈವಾರ ಕ್ಷೇತ್ರ ಬಹಳ ಪವಿತ್ರವಾದದ್ದು ಹಾಗೂ ಧಾರ್ಮಿಕ ಪ್ರವಾಸಿ ತಾಣವೂ ಆಗಿದೆ ಎಂದರು.
ಮೈಲಾಕ್ ಪೈಂಟ್ ಮಾಜಿ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ, ‘ತಾತಯ್ಯನವರು ತತ್ವಜ್ಞಾನಿ, ತ್ರಿಕಾಲಜ್ಞಾನಿ ಜೊತೆಗೆ ಯುಗಪುರುಷರು ಆಗಿದ್ದಾರೆ. ಪ್ರಚಲಿತ ಘಟಣೆಗಳ ಕುರಿತು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಸಮಾಜವನ್ನು ಅಧರ್ಮದಿಂದ ಸುಧರ್ಮದೆಡೆಗೆ ಹಾಗೂ ಜನರನ್ನು ತತ್ವಜ್ಞಾನದಿಂದ ದೈವಸಂಕಲ್ಪದೆಡೆಗೆ ಕೊಂಡೊಯ್ದರು. ಆದರ್ಶ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಶಿವಕುಮಾರ್, ಮೀನಾ ತೂಗುದೀಪ್, ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಮೈಕ ಪ್ರೇಮ್ ಕುಮಾರ್, ಸಂಘದ ಗೌರವ ಸಲಗಾರರ ಆನಂದ್, ಸಂಘದ ಅಧ್ಯಕ್ಷರಾದ ಗುರುರಾಜ್ ಶೆಟ್ಟಿ, ರಾಜೇಶ್, ವಿನಯ್, ರಮೇಶ್, ಗುರುಪ್ರಸಾದ್, ಉಮೇಶ್, ಪ್ರಶಾಂತ್, ನಿತಿನ್, ರಾಜು, ಜಿ ಶ್ರೀನಾಥ್ ಬಾಬು, ಜಿ ರಾಘವೇಂದ್ರ, ಹರೀಶ್ ನಾಯ್ಡು, ಉಮೇಶ್, ಪ್ರಕಾಶ್ ನಾಯ್ಡು, ಹಾಗೂ ಇನ್ನಿತರರು ಭಾಗಿಯಾಗಿದ್ದರು.