ಮೈಸೂರು: ಶೇ.100ರಷ್ಟು ಕಮಿಷನ್ ಪಡೆಯಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ನವರು ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯದ್ದು ಶೇ.40ರಷ್ಟು ಕಮಿಷನ್ ಸಂಕಲ್ಪ ಯಾತ್ರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ನವರ ಕೈಗಳೇ ಕಪ್ಪಾಗಿವೆ. ಅವರಿಗೆ ಭ್ರಚ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟಾಂಗ್ ಕೊಟ್ಟರು. ಲೋಕಾಯುಕ್ತವನ್ನು ಬಂದ್ ಮಾಡಿದ್ದೆ ಎಂಬುದನ್ನು ಬಿಜೆಪಿಯವರು ಸಾಬೀತುಪಡಿಸಿದರೆ ತಕ್ಷಣ ರಾಜೀನಾಮೆ ಕೊಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಲೋಕಾಯುಕ್ತ ಬಂದ್ ಮಾಡಲಿಲ್ಲ. ಆದರೆ, ಹಲ್ಲುಗಳನ್ನೆಲ್ಲಾ ಕಿತ್ತು ಹಾಕಿದರು. ಹಲ್ಲು ಕಿತ್ತ ಮೇಲೆ ಇದ್ದರೆಷ್ಟು, ಇಲ್ಲದಿದ್ದರೆಷ್ಟು. ಸಿದ್ದರಾಮಯ್ಯ ತಮ್ಮ ಕಾಲದಲ್ಲೇಕೆ ಕೇಸ್ಗಳನ್ನು ಎಸಿಬಿಗೆ ವರ್ಗಾಯಿಸುತ್ತಿದ್ದರು ಎಂದು ಕೇಳಿದರು.
ಮಾ.9ರಂದು ಕಾಂಗ್ರೆಸ್ನಿಂದ ಬಂದ್ಗೆ ಕರೆ ನೀಡಿರುವ ಕುರಿತು ವ್ಯಂಗ್ಯವಾಡಿದ ಅವರು, 2 ಗಂಟೆ ಬಂದ್ ಎಂದರೆ ಏನರ್ಥ? ಎಂದಾದರೂ ಇಂಥ ಬಂದ್ ಬಗ್ಗೆ ಕೇಳಿದ್ದೀರಾ. ಇದನ್ನು ಬಂದ್ ಎನ್ನುತ್ತಾರಾ? ಭ್ರಷ್ಟಾಚಾರ ಮಾಡಿದವರು, ಜೈಲಿಗೆ ಹೋಗಿ ಬಂದವರು ಕರೆ ಕೊಟ್ಟರೆ ಜನರ ಮುಂದೆ ನಡೆಯುತ್ತದೆಯೇ? ಈ ಬಂದ್ಗೆ ಯಾವ ಬೆಲೆಯೂ ಇಲ್ಲ. ಅಂದು ಪರೀಕ್ಷೆಗಳಿವೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ಇದು ಕಾಂಗ್ರೆಸ್ನವರಿಗೆ ಅರ್ಥವಾಗುವುದಿಲ್ಲ. ಬಂದ್ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶವೂ ಇದೆ ಎಂದರು.
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಕಾಂಗ್ರೆಸ್ಗೆ ಹೇಗೆ ಸಲ್ಲುತ್ತದೆ? ರಸ್ತೆಯಾಗಿದ್ದು ನಮ್ಮ ಸರ್ಕಾರದಲ್ಲಿ, ಮಾಡಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಸಿದ್ದರಾಮಯ್ಯ ಹೇಗೆ ಮಾಡುತ್ತಾರೆ? ಕಾಂಗ್ರೆಸ್ನವರ ಮಾತು ಕೇಳಿದರೆ ಜನ ನಗುತ್ತಾರೆ. ಹಾಗೆ ನೋಡಿದರೆ, ರಸ್ತೆ ವಿಸ್ತರಣೆ ಆಗಬೇಕೆಂಬ ಪ್ರಸ್ತಾಪ 20 ವರ್ಷಗಳ ಹಿಂದಿನಿಂದಲೂ ಇತ್ತು. ಪ್ರಸ್ತಾಪಕ್ಕೂ ಹಣ ಬಿಡುಗಡೆ ಮಾಡಿ ಅನುಷ್ಠಾನಕ್ಕೆ ತರುವುದಕ್ಕೂ ವ್ಯತ್ಯಾಸವಿದೆ ಎಂದು ತಿರುಗೇಟು ನೀಡಿದರಲ್ಲದೆ, ಸಿದ್ದರಾಮಯ್ಯ ಹೆದ್ದಾರಿ ಪರಿಶೀಲನೆ ನಡೆಸಲು ನಮ್ಮ ತಕರಾರೇನಿಲ್ಲ. ಈಗಾಗಲೇ ಅಲ್ಲಿ ಸಾವಿರಾರು ಜನರು ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಮುಖಂಡ ಎಸ್.ಸಂದೇಶ್ ಸ್ವಾಮಿ ಇದ್ದರು.