ಮೈಸೂರು: ಬಿರುಗಾಳಿ ಸಹಿತ ಬಿದ್ದ ಮಳೆಯ ರಭಸಕ್ಕೆ ರೈತ ಕಷ್ಟಪಟ್ಟು ಬೆಳೆದಿದ್ದ ಬಾಳೆ ತೋಟ ಹಾಗೂ ತೆಂಗಿನ ಮರಗಳು ನಾಶವಾಗಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಹಂಚಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿಪುರ ಗ್ರಾಮದಲ್ಲಿ ನಡೆದಿದೆ.
ಹಂಚಿಪುರ ಗ್ರಾಮದ ನಂದೀಶ್ ಅವರಿಗೆ ಸೇರಿದ 4 ಎಕರೆ ಪ್ರದೇಶದಲ್ಲಿ ಬಾಳೆ ತೋಟ ಹಾಗೂ ತೆಂಗಿನ ಮರ ಬೆಳೆದಿದ್ದರು. ಬಾಳೆ ಫಸಲಿಗೆ ಬರುವ ಹಂತದಲ್ಲಿದ್ದರೆ, ತೆಂಗಿನ ಮರಗಳು ಫಸಲು ಬಿಡುತ್ತಿದ್ದವು. ಇದನ್ನೇ ನಂಬಿ ರೈತ ನಂದೀಶ್ ಜೀವನ ಸಾಗಿಸುತ್ತಿದ್ದರು. ಇದೀಗ ಗಾಳಿ ಮತ್ತು ಮಳೆಯಿಂದಾಗಿ ತೆಂಗಿನ ಮರಗಳು ನೆಲಕ್ಕುರುಳಿದ್ದು, ಬಾಳೆಗಳು ಮುರಿದು ಬಿದ್ದಿವೆ, ಇದರಿಂದಾಗಿ ಸುಮಾರು 10 ಲಕ್ಷಕ್ಕೂ ಹೆಚ್ಚು ಬೆಳೆ ನಾಶವಾಗಿದೆ.
ಇದೀಗ ಬಿರುಗಾಳಿಯಿಂದ ಬಾಳೆ ಗಿಡಗಳು, ತೆಂಗಿನ ಮರಗಳು ಬುಡ ಸಮೇತ ನೆಲಕ್ಕುರುಳಿ ನಷ್ಟ ಅನುಭವಿಸಿ ಕಂಗಾಲಾಗಿರುವ ನಂದೀಶ್ ಸಾಲ ಮಾಡಿ ಬೆಳದಿದ್ದ ಬೆಳೆಯು ಕೈಗೆ ಸೇರುವ ಹೊತ್ತಿನಲ್ಲಿ ನಾಶವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸರ್ಕಾರದಿಂದ ಬರುವಂತಹ ಪರಿಹಾರವನ್ನು ಕೊಡಿಸುವಂತೆ ಅವರು ಮನವಿ ಮಾಡಿದ್ದಾರೆ.