ಮೈಸೂರು: ದೇಶದಲ್ಲಿ ವಿವಿಧ ಕ್ಷೇತ್ರಗಳ ಬಗ್ಗೆ ಅಧ್ಯಯನ ನಡೆಸಲು ಬಂದಿದ್ದ ಆಸ್ಟ್ರೇಲಿಯಾದ ಸಂಸದೀಯ ನಿಯೋಗದವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯೊಂದಿಗೆ ಸಮಾಲೋಚಿಸಿದರು.
ಅಲ್ಲಿನ ಅಸೆಂಬ್ಲಿಯ ಸಭಾಧ್ಯಕ್ಷೆ ಮಿಚೆಲ್ ರಾಬರ್ಟ್ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷದ ನಾಯಕ ಡಾ.ಡೇವಿಡ್ ಹನಿ, ಶಾಸಕರಾದ ಡಾ.ಜಗದೀಶ್ ಕೃಷ್ಣನ್, ಕ್ಯಾಸಂಡ್ರ ರೋ ಮತ್ತು ಡೇವಿಡ್ ನಿಯೋಗದಲ್ಲಿದ್ದರು. ಜೆಎಸ್ಎಸ್ ಸಂಸ್ಥೆಗಳು ಆಸ್ಟ್ರೇಲಿಯಾದ ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಹೊಂದಿರುವ ಪರಸ್ಪರ ಒಡಂಬಡಿಕೆಗಳ ವಿವರಗಳನ್ನು ಅವರ ಗಮನಕ್ಕೆ ತರಲಾಯಿತು. ಅದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು.
ಜೆಎಸ್ಎಸ್ ಸಂಸ್ಥೆಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಬೋಧಕರು ಅಲ್ಲಿಯ ವಿವಿಧ ವಿ.ವಿ.ಗಳೊಂದಿಗೆ ಶೈಕ್ಷಣಿಕ ವಿನಿಮಯದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಭಾರತ ಆಸ್ಟ್ರೇಲಿಯಾ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಯಾಗಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಡಾ.ಸುರೀಂದರ್ ಸಿಂಗ್, ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ಹಲಸೆ, ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿ ಕೆಂಪಹೊನ್ನಯ್ಯ, ಕುಲಸಚಿವ ಡಾ.ಬಿ.ಮಂಜುನಾಥ್, ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ ಭಾಗವಹಿಸಿದ್ದರು.