ಮೈಸೂರು: ರಾಜ್ಯದಲ್ಲಿ ಹಿಂದುಳಿದ ಕ್ಷೇತ್ರಗಳಲ್ಲಿ ಒಂದು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ನರಸಿಂಹರಾಜ ಕ್ಷೇತ್ರದ ಅಭಿವೃದ್ಧಿಗೆ ಬದ್ಧ ಎಂದು ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಭರವಸೆ ನೀಡಿದರೆ, ಹಾಲಿ ಶಾಸಕ ತನ್ವೀರ್ ಸೇಠ್ ಐದು ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮೊದಲಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಸಂದೇಶ್ಸ್ವಾಮಿ, ನಾನು ಪಾಲಿಕೆ ಸದಸ್ಯನಾದ ಬಳಿಕ ನರಸಿಂಹರಾಜ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನೀರಿನ ಸಮಸ್ಯೆ ಬಗೆಹರಿಸಿದ್ದೇನೆ. ಜಲಪುರಿ ಬಡಾವಣೆಗೆ ನೀರು, ಎಸ್ಪಿ ಕಚೇರಿ ಬಳಿಯ ರಸ್ತೆ ಅಭಿವೃದ್ಧಿ ಇವುಗಳಲ್ಲಿ ಸೇರಿವೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಆದರೆ, ಕ್ಷೇತ್ರದ ಶಾಸಕರು ಅಭಿವೃದ್ಧಿಗೆ ಗಮನ ನೀಡದ ಕಾರಣ ಶಿಕ್ಷಣ ವ್ಯವಸ್ಥೆಯಿಲ್ಲ. ಕಡುಬಡವರಾಗಿದ್ದು, ನಗರದ ಅತಿ ಹೆಚ್ಚು ಅಪರಾಧ ಪ್ರಕರಣ ಈ ಕ್ಷೇತ್ರದಲ್ಲೇ ವರದಿಯಾಗುತ್ತಿವೆ. ಅಲ್ಲದೆ ಸುಸಜ್ಜಿತ ಆಸ್ಪತ್ರೆ, ಕಾಲೇಜು ಕ್ಷೇತ್ರದಲ್ಲಿಲ್ಲ. ಹೀಗಾಗಿ ತಾವು ಆಯ್ಕೆಯಾದರೆ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಕ್ಷೇತ್ರದ ಜನತೆ ತಮ್ಮ ಕುಟುಂಬಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಈ ಹಿಂದೆ ಪಾಲಿಕೆ ಲಾರಿ ಬಂದರೆ ಮಾತ್ರ ಕ್ಷೇತ್ರದ ಜನತೆಗೆ ಕುಡಿಯುವ ನೀರು ಎಂಬ ಪರಿಸ್ಥಿತಿ ಇತ್ತು. ಚರಂಡಿ, ಉತ್ತಮ ರಸ್ತೆ ಇರಲಿಲ್ಲ. ಈಗ ಆ ಸಮಸ್ಯೆ ಹೋಗಲಾಡಿಸಲಾಗಿದೆ. ಕ್ಷೇತ್ರದಲ್ಲಿ ಸಾರ್ವಜನಿಕ ಬಳಕೆಯ ನಿವೇಶನ, ಖಾಲಿ ಜಾಗ ಇಲ್ಲದ ಕಾರಣ ಆಸ್ಪತ್ರೆ, ಶಾಲಾ ಕಾಲೇಜು ನಿರ್ಮಿಸಲಾಗಿರಲಿಲ್ಲ. ಆದರೆ, ಹೊಸ ಬಡಾವಣೆಗಳು ಸೇರ್ಪಡೆಯಾದ ಬಳಿಕ ನಿರ್ಮಿಸಲಾಗಿದೆ ಎಂದರು.
ಜತೆಗೆ 9 ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. 10 ಸಾವಿರಕ್ಕೂ ಹೆಚ್ಚು ಮನೆಗಳನ್ನು ವಾಜಪೇಯಿ, ಬಸವ, ಅಂಬೇಡ್ಕರ್ ಮೊದಲಾದ ಯೋಜನೆ ಅಡಿಯಲ್ಲಿ ನಿರ್ಮಿಸಿಕೊಡಲಾಗಿದೆ. ಈ ನಡುವೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರಿಗೆ ಮನೆ ನಿರ್ಮಿಸಿಕೊಟ್ಟ ಬಳಿಕ, ಗುಡಿಸಲನ್ನು ತೆರವುಗೊಳಿಸದೇ ಅವುಗಳಲ್ಲಿ ಇತರರು ಬಂದು ವಾಸಿಸುತ್ತಿರುವ ಕಾರಣ ಮನೆ ಕೊರತೆ ಕಂಡುಬಂದಿದೆ. ಆದರೆ, ಅವರಿಗೂ ಮನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅಭಿವೃದ್ಧಿಯ ಜತೆಗೆ ಕ್ಷೇತ್ರದಲ್ಲಿ ಶಾಂತಿ ಕಾಪಾಡುವ ಕೆಲಸ ಮಾಡುತ್ತಿದ್ದೇನೆ. ಒಟ್ಟಾರೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಖಾದರ್ ಶಾಹಿದ್ ಮಾತನಾಡಿ, ಕೂಲಿ ಕಾರ್ಮಿಕರು, ಲಾರೀ ಚಾಲಕರು, ಆಟೋ ಚಾಲಕರೇ ತಮ್ಮ ಬೆಂಬಲಕ್ಕಿದ್ದಾರೆ. ಈ ಹಿಂದೆ ತಾವು ಚುನಾವಣೆಗೆ ನಿಂತು ಸೋತರೂ ಅತಿ ಹೆಚ್ಚು ಮತಗಳು ಬಂದಿದ್ದವು. ಯಾವುದೇ ಸರ್ಕಾರ ಬಂದರೂ ರಸ್ತೆ, ಚರಂಡಿ, ನೀರು ಸೌಲಭ್ಯ ಕಲ್ಪಿಸಬೇಕು. ಆದರೆ, ಬಡಜನರಿಗೆ ಏನು ಸೌಲಭ್ಯ ಸಿಕ್ಕಿದೆ ಎಂಬುದು ಮುಖ್ಯ. ಕ್ಷೇತ್ರದಲ್ಲಿ ಪದವಿ ಪಡೆದರೂ ಉದ್ಯೋಗ ಸಿಗದ ನಿರುದ್ಯೋಗಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಖಾಸಗಿ ಕಂಪನಿಗಳನ್ನು ಕ್ಷೇತ್ರಕ್ಕೆ ತರಲು ಶ್ರಮಿಸುತ್ತೇನೆ. ಕೋವಿಡ್ ವೇಳೆ ನಾನು ನೆರವು ನೀಡಿರುವುದು ಜನತೆಗೆ ತಿಳಿದಿದೆ. ಹೀಗಾಗಿ ನಾನು ಆಯ್ಕೆಯಾದಲ್ಲಿ ಕ್ಷೇತ್ರವನ್ನು ಜೋಪಡಿ ಮುಕ್ತಗೊಳಿಸುತ್ತೇನೆ. ಆದ್ದರಿಂದ ಜನತೆ ಕೈಹಿಡಿಯುವ ವಿಶ್ವಾಸವಿದೆ ಎಂದರು.
ಹಾಲಿ ಶಾಸಕರು ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ ಎಂದರೆ, ಇತರೆ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಇದಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಸಮರ್ಥಿಸಿಕೊಂಡರು.
ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಇದ್ದರು.