ಮೈಸೂರು: ಮೃಗಾಲಯದಲ್ಲಿ ರಿಂಗ್ ಟೈಲ್ಡ್ ಲೆಮೂರು ಪ್ರಾಣಿಗಳಿಗಾಗಿ ನಿರ್ಮಿಸಿರುವ ಮನೆಯನ್ನು ಉದ್ಘಾಟಿಸಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ.ಲಿ(ಬಿಆರ್ಬಿಎನ್ಪಿಎಲ್) ಸಂಸ್ಥೆಯು ಸಿಎಸ್ಆರ್ ನಿಧಿಯಲ್ಲಿ ಮೃಗಾಲಯದಲ್ಲಿ 75 ಲಕ್ಷ ರೂ. ವೆಚ್ಚ ಮಾಡಿ, ರಿಂಗ್ ಟೈಲ್ಡ್ ಲೆಮೂರು ಪ್ರಾಣಿಗಳಿಗಾಗಿ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ. ಹೊಸ ಮನೆ ನಿರ್ಮಾಣದ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯಕ್ಕೆ ಜೆಕ್ ರಿಪಬ್ಲಿಕ್ನಲ್ಲಿನ ಜೂ ಪಾರ್ಕ್ನಿಂದ ಇತ್ತೀಚೆಗೆ ತರಲಾಗಿದ್ದ ಎರಡು ಗಂಡು, ಮೂರು ಹೆಣ್ಣು ರಿಂಗ್ ಟೈಲ್ಡ್ ಲೆಮೂರು ಪ್ರಾಣಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಬಿಡುಗಡೆ ಮಾಡಲಾಯಿತು.
ಇದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ.ಲಿ(ಬಿಆರ್ಬಿಎನ್ಪಿಎಲ್) ಹಿರಿಯ ಪ್ರಧಾನ ವ್ಯವಸ್ಥಾಪಕ ಹರ್ಷಕುಮಾರ್ ಮನ್ರಾಲ್ ನೂತನ ಮನೆ ಉದ್ಘಾಟಿಸಿ, ಬೋನ್ನಿಂದ ಪ್ರಾಣಿಗಳನ್ನು ವೀಕ್ಷಣಾ ಆವರಣಕ್ಕೆ ಬಿಡುಗಡೆ ಮಾಡಲು ಹಸಿರು ನಿಶಾನೆ ತೋರಿಸಿದರು. ಈ ವೇಳೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಬಿಆರ್ಬಿಎನ್ಎಂಪಿಎಲ್ ಉಪ ವ್ಯವಸ್ಥಾಪಕ ಪ್ರಮೋದ್ ಕುಮಾರ್, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.