ಮೈಸೂರು: ಸ್ವಚ್ಛತಾ ಅಭಿಯಾನಗಳು ಮನೆ ಮನೆಯಲ್ಲೂ ಆರಂಭಗೊಳ್ಳಬೇಕು ಆಗ ಮಾತ್ರ ಪರಿಸರ ಸುಂದರವಾಗಿಡಲು ಸಾಧ್ಯವಿದೆ ಎಂದು ಮೇಯರ್ ಶಿವಕುಮಾರ್ ಹೇಳಿದ್ದಾರೆ.
ನಗರದ ದೊಡ್ಡ ಮಾರ್ಕೆಟ್ ಮುಂಭಾಗ ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸುವ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಕಾಲಘಟ್ಟದಲ್ಲಿ ಸ್ವಚ್ಛತೆ ಎಲ್ಲಿ ಆರಂಭಗೊಳ್ಳ ಬೇಕೆಂಬುದರ ಬಗ್ಗೆ ಪ್ರಾಥಮಿಕ ಹಂತದಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸಿದಾಗ ಕಂಡ ಕಂಡಲ್ಲಿ ಕಸ ಎಸೆಯುವ ಮನಸ್ಥಿತಿ ತಗ್ಗಲಿದೆ ಎಂದರು.
ಪ್ರಸ್ತುತ ಪ್ಲಾಸ್ಟಿಕ್ ತ್ಯಾಜ್ಯ ನಮ್ಮ ಪರಿಸರವನ್ನು ಆವರಿಸಿಕೊಂಡಿದೆ, ಇದರಿಂದ ವಿವಿಧ ರೀತಿಯ ಸಾಂಕ್ರಾಮಿಕ ಕಾಯಿಲೆಗಳು ಸೃಷ್ಠಿಯಾಗುತ್ತಿವೆ. ಪರಿಸರವನ್ನು ನಾವು ಆರಾಧಿಸಿದರೆ ಅವು ನಮ್ಮ ಮುಂದಿನ ಪೀಳಿಗೆಯನ್ನು ಕಾಯುತ್ತವೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಂಘ ಸಂಸ್ಥೆಗಳ ವಿವಿಧ ಬಗ್ಗೆಯ ಕಾರ್ಯಕ್ರಮಗಳು ಸಹಕಾರಿ ಈ ನಿಟ್ಟಿನಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಯುವಕರ ಕಾರ್ಯ ಶ್ಲಾಘನೀಯ ಎಂದರು.
ಬಿಜೆಪಿ ಮುಖಂಡರಾದ ಆರ್ ರಘು ಕೌಟಿಲ್ಯ ಮಾತನಾಡಿ ಪ್ರತಿಯೊಬ್ಬರ ಮನೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಪಣತೊಡಬೇಕಾಗಿದೆ. ಅಡುಗೆ ಮನೆಯ ಸಾಮಗ್ರಿಗಳು ಪ್ಲಾಸ್ಟಿಕ್ ಮಯವಾಗುವುದನ್ನು ನಿಲ್ಲಿಸಬೇಕು. ಮಾರುಕಟ್ಟೆಗೆ ತೆರಳಿದಾಗ ಪ್ಲಾಸ್ಟಿಕ್ ಕವರ್ಗಳನ್ನು ನೆಚ್ಚಿಕೊಂಡಿರಬಾರದು. ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿ ಬ್ಯಾಗ್ಗಳನ್ನು ಅನುಸರಿಸಿದರೆ ಪರಿಸರ ಸಂರಕ್ಷ ಣೆ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ನಗರಪಾಲಿಕಾ ಸದಸ್ಯರಾದ ಪ್ರಮೀಳಾ ಬರತ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಪರಿಸರ ಇಂಜಿನಿಯರ್ ಜ್ಯೋತಿ, ಕಿರಿಯ ಆರೋಗ್ಯ ನಿರೀಕ್ಷಕರು ಪ್ರೀತಿ ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷರಾದ ರವಿಶಂಕರ್, ಬೈರತಿ ಲಿಂಗರಾಜು, ಎಸ್ ಎನ್ ರಾಜೇಶ್, ದೂರ ರಾಜಣ್ಣ, ಸುಚೇಂದ್ರ, ವಿಘ್ನೇಶ್ವರ ಭಟ್, ವೆಂಕಟ್ ರಾಮು, ಚರಣ್ ಇನ್ನಿತರರು ಇದ್ದರು.