ಮೈಸೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದಿನ ಸರ್ಕಾರದ ಎಲ್ಲ ಹಗರಣಗಳನ್ನು ತನಿಖೆ ಮಾಡುವುದಾಗಿ ಹೇಳಿದ್ದರು ಅದರಂತೆ ತನಿಖೆ ಮಾಡಲಿ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಆರೋಪಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಸತ್ಯಾಸತ್ಯತೆ ಕರ್ನಾಟಕದ ಜನತೆಗೆ ಗೊತ್ತಾಗಬೇಕು. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೆಂದು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರು-ಮೈಸೂರು 118 ಕಿ.ಮೀ. ಹೆದ್ದಾರಿಯಲ್ಲಿ ಪೆನ್ಸಿಂಗ್ ಕಬ್ಬಿಣ ಕಳ್ಳತನದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಸದ ಪ್ರತಾಪ ಸಿಂಹ ಅವರು, ಗುಜರಿಗೆ ಹಾಕಲು ಯಾರಾದರೂ ಕಬ್ಬಿಣ ಕಳ್ಳತನ ಮಾಡಿದರೆ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ಮನವಿ ಮಾಡಿದರು.
ದಕ್ಷಿಣ ಭಾರತದಲ್ಲಿಯೇ ಮೊದಲು ಪ್ರವೇಶ ಮತ್ತು ನಿರ್ಗಮನದ ತನಕ ಸಂಚಾರಕ್ಕೆ ಅಡಚಣೆ ಇರಬಾರದೆಂದು, ಪ್ರಾಣಿಗಳು ರಸ್ತೆ ಪ್ರವೇಶಿಸುವುದನ್ನು ತಡೆಯಲು ಪೆನ್ಸಿಂಗ್ ಹಾಕಲಾಗಿದೆ. ಈ ರಸ್ತೆಯಿಂದ ಆ ರಸ್ತೆಗೆ ಹೋಗಲು ಕಬ್ಬಿಣ ಕಟ್ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ 80 ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.