ಮೈಸೂರು: ಮೈಸೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ಗೆ 6 ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ರೈಲು ಕಲ್ಲು ತೂರಾಟಗಾರರ ದಾಳಿಗೆ ಪದೇ ಪದೇ ಗುರಿಯಾಗುತ್ತಿದ್ದು, ಕಳೆದ 6 ತಿಂಗಳಲ್ಲಿ ಒಟ್ಟು 64 ಕಿಟಕಿಗಳು ಹಾನಿಗೊಳಗಾಗಿವೆ. ಕಲ್ಲು ತೂರಾಟ ವಂದೇ ಭಾರತ್ ಎಕ್ಸ್ಪ್ರೆಸ್ ರೈಲ್ವೇ ಎದುರಿಸುತ್ತಿರುವ ಹೊಸದೊಂದು ಸಂಕಷ್ಟವಾಗಿದೆ. ಆರೂವರೆ ತಿಂಗಳ ಅವಧಿಯಲ್ಲಿ ಮೈಸೂರು-ಚೆನ್ನೈ ವಂದೇ ಭಾರತ್ ರೈಲು ಹೆಚ್ಚು ದಾಳಿಗೆ ಒಳಗಾಗಿದೆ.
ತಮಿಳುನಾಡಿನಲ್ಲಿ ನಡೆದ ಏಳು ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಏಳು ಕಿಟಕಿಗಳನ್ನು ಹಾನಿಗೊಳಿಸಿದ್ದಾರೆ ಎಂದು ಎಸ್ಆರ್ ಚೆನ್ನೈ ವಿಭಾಗದ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ಅನಂತ್ ರೂಪನಗುಡಿ ಹೇಳಿದ್ದಾರೆ. ಉಳಿದವುಗಳನ್ನು ಜೋಲಾರ್ಪೇಟೆ (ಬೆಂಗಳೂರು ವಿಭಾಗದ ಅಧಿಕಾರ ವ್ಯಾಪ್ತಿ) ಗೆ ದಾಖಲಿಸಲಾಗಿದೆ. ಶೇ.80ಕ್ಕಿಂತ ಹೆಚ್ಚು ಘಟನೆಗಳು ಬೆಂಗಳೂರು ವಿಭಾಗದ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸಂಭವಿಸಿವೆ ಎಂದು ಅನಂತ್ ತಿಳಿಸಿದ್ದಾರೆ.
ಬೆಂಗಳೂರಿನ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಮಾತನಾಡಿ, ಬೆಂಗಳೂರು ವ್ಯಾಪ್ತಿಯಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿರುವುದರಿಂದ 26 ಕಿಟಕಿಗಳನ್ನು ಬದಲಾಯಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಈ ಪೈಕಿ ಸುಮಾರು 10 ನಿದರ್ಶನಗಳು ರಾಮನಗರ ಮತ್ತು ಮಂಡ್ಯ ನಡುವೆ ನಡೆದಿದ್ದರೆ ಉಳಿದವು ಮಾಲೂರು ಮತ್ತು ಕಂಟೋನ್ಮೆಂಟ್ ನಡುವೆ ನಡೆದಿವೆ ಎಂದು ಕುಸುಮಾ ಹೇಳಿದ್ದಾರೆ. ಯಾವುದೇ ಒಂದು ನಿರ್ದಿಷ್ಟ ರೈಲಿನಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಕಲ್ಲು ತೂರಾಟ ಪ್ರಕರಣಗಳು ದಾಖಲಾಗಿಲ್ಲ ಎಂದು ಎರಡೂ ವಿಭಾಗದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಯಾವುದೇ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ನಂತೆ ಆಗಾಗ್ಗೆ ದಾಳಿಗೆ ಒಳಗಾಗಿಲ್ಲ. ಇದೇ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ ಎಕ್ಸ್ ಪ್ರೆಸ್ ಇಷ್ಟು ವರ್ಷಗಳಲ್ಲಿ ಇಷ್ಟೊಂದು ಕಲ್ಲು ತೂರಾಟ ಪ್ರಕರಣಗಳನ್ನು ಕಂಡಿರಲಿಲ್ಲ. 2023ರ ಜನವರಿಯಿಂದ ತಮಿಳುನಾಡಿನಲ್ಲಿ ಶತಾಬ್ದಿ ಎಕ್ಸ್ ಪ್ರೆಸ್ನಲ್ಲಿ ಎರಡು ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿವೆ, ವಂದೇ ಭಾರತ್ನಲ್ಲಿ ಸುಮಾರು ಐದು ಅಥವಾ ಆರು ಪ್ರಕರಣಗಳು ವರದಿಯಾಗಿವೆ ಎಂದು ರಾಜಯ್ಯ ಹೇಳಿದ್ದಾರೆ.
ವಂದೇ ಭಾರತ್ ಇತರ ರೈಲುಗಳಿಗಿಂತ ಭಿನ್ನವಾಗಿ ಬೃಹತ್ ಕಿಟಕಿಗಳನ್ನು ಹೊಂದಿದೆ. ಬಹುಶಃ ಇದು ದಾಳಿಗೆ ಪ್ರೇರೇಪಣೆ ನೀಡಿರಬಹುದು. ಆದರೆ ರೈಲ್ವೆ ಸಂರಕ್ಷಣಾ ಪಡೆಯಿಂದ (ಆರ್ಪಿಎಫ್) ಇನ್ನೂ ಯಾವುದೇ ಪ್ರಮುಖ ಕಾರಣವನ್ನು ಕಂಡುಹಿಡಿಯಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ, ತಮಿಳುನಾಡು ಆರ್ಪಿಎಫ್ ಮೇ 6 ರಂದು ಚೆನ್ನೈನ ಅರಕ್ಕೋಣಂ ಬಳಿ ರೈಲಿಗೆ ಕಲ್ಲು ತೂರಾಟ ನಡೆಸಿದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದೆ. 11 ವರ್ಷದ ಬಾಲಕ ರೈಲಿಗೆ ತಮಾಷೆಯಾಗಿ ಕಲ್ಲು ಎಸೆದಿದ್ದಾನೆ ಎಂದು ಅರಕ್ಕೋಣಂ ಆರ್ಪಿಎಫ್ ಇನ್ಸ್ ಪೆಕ್ಟರ್ ಮೊಹಮ್ಮದ್ ಉಸ್ಮಾನ್ ತಿಳಿಸಿದ್ದಾರೆ. ನಾವು ಅವರ ಪೋಷಕರಿಗೆ ತಿಳಿಸಿದ್ದೇವೆ. ಅಂತಹ ಕೃತ್ಯಗಳ ಅಪಾಯಗಳ ಬಗ್ಗೆ ಅವರಿಗೆ ಸಲಹೆ ನೀಡಿದ್ದೇವೆ. ಆತನನ್ನು ಬೆದರಿಸಿ ಮನೆಗೆ ಕಳುಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ, ಪೊಲೀಸರು ಗುರುತಿಸಿರುವ ದುಷ್ಕರ್ಮಿಗಳಲ್ಲಿ ಹೆಚ್ಚಿನವರು 10 ರಿಂದ 18 ವರ್ಷದೊಳಗಿನ ಅಪ್ರಾಪ್ತ ವಯಸ್ಕರು ಎಂದು ಬೆಂಗಳೂರು ವಿಭಾಗವು ವರದಿ ಮಾಡಿದೆ. ರೈಲಿಗೆ ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಒಬ್ಬ ವಯಸ್ಕ, 36 ವರ್ಷದ ಅಬಿಜಿತ್ ಅಗರ್ವಾಲ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದವು. ಅವರ ಕ್ರಮಕ್ಕೆ ಕಾರಣ ಗುರುತಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.