ನಂಜನಗೂಡು: ಚುನಾವಣೆಯ ಸೋಲನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.
ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಭಾನುವಾರ ನಗರದ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯವಾಗಿದ್ದು, ಕಾರ್ಯಕರ್ತರು ಈ ಸೋಲಿನಿಂದ ಧೃತಿಗೆಡುವ ಅಗತ್ಯವಿಲ್ಲ ಎಂದರು.
ನಂಜನಗೂಡಿನ ಜನತೆ ಅಭಿವೃದ್ಧಿಯನ್ನು ಬದಿಗಿಟ್ಟು ಮತ ಚಲಾಯಿಸಿದ್ದಾರೆ. ಜತೆಗೆ ಪ್ರತಿಸ್ಪರ್ಧಿ ಮೇಲಿನ ಅನುಕಂಪ ಹಾಗೂ ಜಾ.ದಳದ ಬೆಂಬಲದಿಂದಾಗಿ ಕಾಂಗ್ರೆಸ್ ಗೆಲುವು ಸಾಧಿಸಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಿದರು. ನಂಜನಗೂಡು ಮಾತ್ರವಲ್ಲ, ರಾಜ್ಯದೆಲ್ಲೆಡೆ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಲಿ. ನಾವು ಕೂಡ ಅವರೊಂದಿಗೆ ಕೈಜೋಡಿಸಿ ಜನರ ನೆರವಿಗೆ ನಿಲ್ಲೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.