ಮೈಸೂರು: ಹಾಡಹಗಲೇ ಮೈಸೂರಿನಲ್ಲಿ ನೆತ್ತರು ಹರಿದಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವಿ.ವಿ.ಪುರಂ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿ ಘಟನೆ ನಡೆದಿದ್ದು, ಕೊಲೆಯ ಆರೋಪಿ ಸ್ಥಾನದಲ್ಲಿದ್ದ ರೌಡಿಶೀಟರ್ ಚಂದ್ರು ಅಲಿಯಾಸ್ ಚಂದು ಹತ್ಯೆಗೀಡಾಗಿದ್ದಾನೆ. ಈತ ಒಂಟಿಕೊಪ್ಪಲು ನಿವಾಸಿಯಾಗಿದ್ದು, ಕಳೆದ ಕೆಲ ವರ್ಷಗಳ ಹಿಂದಷ್ಟೇ ನಡೆದಿದ್ದ ದೇವು ಕೊಲೆ ಪ್ರಕರಣದಲ್ಲಿ ಈತ ಕೂಡ ಆರೋಪಿಯಾಗಿದ್ದ. ಸಂಜೆ ಐದು ಗಂಟೆ ವೇಳೆಗೆ ಮನೆ ಬಳಿ ನಿಂತಿದ್ದ ಚಂದ್ರು ಅವರ ಎದುರಿಗೆ ಬೈಕಿನಲ್ಲಿ ಬಂದ ಯುವಕರ ಗುಂಪೊಂದು ಕ್ಷಣ ಮಾತ್ರದಲ್ಲಿ ಹತ್ಯೆ ಮಾಡಿ ಪರಾರಿಯಾಗಿದೆ. ಕೊಲೆ ಮಾಡಿದವರು ಯಾರು? ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.
ಜನನಿಬಿಡ ಪ್ರದೇಶದಲ್ಲಿ ಏಕಾಏಕಿ ನಡೆದ ಘಟನೆಯಿಂದ ಸುತ್ತಮುತ್ತಲಿನ ಅಂಗಡಿಗಳವರು ಹಾಗೂ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ, ಗಲಾಟೆ ಶುರು ಆಗುತ್ತಿದ್ದಂತೆ ಬಹುತೇಕರು ಹೆದರಿ ಜಾಗ ಖಾಲಿ ಮಾಡಿದ್ದಾರೆ. ಇದರಿಂದ ಹತ್ಯೆ ಆರೋಪಿಗಳು ಯಾವುದೇ ಆತಂಕವಿಲ್ಲದೆ ನಾಪತ್ತೆಯಾಗಿದ್ದಾರೆ.
ರೌಡಿಶೀಟರ್ ದೇವು ಹತ್ಯೆ ವೈಷಮ್ಯದ ಹಿನ್ನಲೆಯಲ್ಲಿ ಚಂದ್ರು ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಕೊಲೆಯಾದ ಚಂದ್ರು ನಗರಪಾಲಿಕೆ ಮಾಜಿ ಸದಸ್ಯ ಅವ್ವಾ ಮಹದೇಶ್ ನಿಕಟವರ್ತಿ ಎಂದು ಹೇಳಲಾಗಿದೆ. ಹತ್ಯೆಗೆ ಹತ್ಯೆಯೇ ಪರಿಹಾರ ಎಂಬ ಅಪಖ್ಯಾತಿಗೆ ಒಳಗಾಗಿರುವ ಪಡುವಾರಹಳ್ಳಿ ಹಾಗೂ ಒಂಟಿಕೊಪ್ಪಲು ಆಸುಪಾಸಿನಲ್ಲಿ ಗುರುವಾರ ನಡೆದ ಘಟನೆ ಇಡೀ ಬಡಾವಣೆಯನ್ನು ಆತಂಕಕ್ಕೀಡುಮಾಡಿದೆ.
ತಣ್ಣಗಿದ್ದ ಮೈಸೂರಿನಲ್ಲಿ ಮತ್ತೆ ಹತ್ಯಾಕಾಂಡವೊಂದು ನಡೆಯುವ ಮೂಲಕ ಮತ್ತೆ ರಕ್ತಪಾತ ಆರಂಭವಾಗುವ ಮುನ್ಸೂಚನೆ ಕಂಡುಬಂದಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಿ.ವಿ.ಪುರಂ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.