ಮೈಸೂರು: ಕಳೆದ ವರ್ಷ 75ನೇ ವರ್ಷದ ಹುಟ್ಟು ಹಬ್ಬ ಆಚರಣೆ ವೇಳೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಬಳಿಕ ಸಿದ್ದರಾಮಯ್ಯ ರಾಜಕೀಯವಾಗಿ ಇನ್ನಷ್ಟು ಬಲಿಷ್ಠರಾಗಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುವ ತನಕ ಬೆಳೆದು ಬಂದಿರುವುದು ಗಮನಾರ್ಹವಾಗಿದೆ.
ಅವತ್ತು ಸಮಾವೇಶಕ್ಕೆ ನೆರೆದ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಸಮೂಹ ನೋಡಿದ ಬಳಿಕ ಅವರಲ್ಲಿದ್ದ ಉತ್ಸಾಹ ಇಮ್ಮಡಿಯಾಗಿತ್ತು. ಆ ಉತ್ಸಾಹದಲ್ಲಿಯೇ ಅವರು ಪಕ್ಷ ಸಂಘಟನೆಗೆ ಇಳಿಯುವ ಮೂಲಕ ಇವತ್ತು ಅಧಿಕಾರದ ಗದ್ದುಗೆ ಹಿಡಿಯುವಂತಾಗಿದೆ. ಜತೆಗೆ ಅವರ ಅದೃಷ್ಟದ ಕ್ಷೇತ್ರ ವರುಣಾದ ಜನರು ಕೈಹಿಡಿದಿದ್ದು ಸಿಎಂ ಆಗಲು ಕಾರಣವಾಗಿದೆ.
ಸಿದ್ದರಾಮೋತ್ಸವ ಒಂದು ಅರ್ಥದಲ್ಲಿ ಕಾಂಗ್ರೆಸ್ ನಾಯಕರು ಒಗ್ಗೂಡಲು ಕಾರಣವಾಗಿತ್ತು. ಅಲ್ಲಿ ತನಕ ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದ ಡಿಕೆಶಿ ಮತ್ತು ಸಿದ್ದು ಒಂದೇ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದರು. ಅವತ್ತು ವೇದಿಕೆಯಲ್ಲಿ ತಮ್ಮ ಹಿಂದಿನ ಸರ್ಕಾರಕ್ಕೂ ಬಿಜೆಪಿಯ ಶೇ.40 ಪರ್ಸೆಂಟ್ ಸರ್ಕಾರಕ್ಕೂ ಹೋಲಿಕೆ ಮಾಡಿ ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶಪಥ ಮಾಡುವಂತೆ ಹೇಳಿದರು. ಅದು ಈಗ ಕೈಗೂಡಿದೆ.
1978ರಲ್ಲಿ ಈ ತಾಲ್ಲೂಕಿನಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಹಳ್ಳಿಗೆ ಸಿಟಿ ಬಸ್, ವರುಣಾ ಚಾನೆಲ್ ಇರಲಿಲ್ಲ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಆದರೆ ಏನು ಮಾಡದವರಿಗೆ ಅಧಿಕಾರ ಕೊಡುತಿದ್ದೀರಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದರು.
ಅವತ್ತೇ ಚುನಾವಣೆಗೆ ತಯಾರಿ ನಡೆಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡಿದ್ದರು. ಜತೆಗೆ ಸಿಕ್ಕ ವೇದಿಕೆಯನ್ನು ಸದುಪಯೋಗಪಡಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದರು. ಜತೆಗೆ ಪಕ್ಷದ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುವಂತೆ ಮಾಡಿದೆ.