ಪಿರಿಯಾಪಟ್ಟಣ: ಸಾರ್ವಜನಿಕರು ಹೆಚ್ಚಾಗಿ ಭೂ ಸಮಸ್ಯೆ ಸೇರಿದಂತೆ ತಿದ್ದುಪಡಿ ಮತ್ತು ಇತರೆ ಕೆಲಸ ಕಾರ್ಯಗಳಿಗಾಗಿ ನೀಡಿರುವ ಅರ್ಜಿ ವಿಲೇವಾರಿ ಮಾಡಬೇಕೆಂಬ ಉದ್ದೇಶದಿಂದ ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯಾಗಾರ ಮತ್ತು ಕಡತ ಯಜ್ಞ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಹಶೀಲ್ದಾರ್ ಕುಂಜಿ ಅಹಮದ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಭವನ ಕಚೇರಿಯಲ್ಲಿ ಕಡತ ವಿಲೇವಾರಿ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು, 3 ದಿನಗಳಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ರಜಾ ದಿನ ನಾಲ್ಕನೇ ಶನಿವಾರ ಸೇರಿದಂತೆ ಮೇ. 26, 27 ಹಾಗೂ 29 ರಂದು ಬಾಕಿ ಉಳಿದಿದ್ದ 500ಕ್ಕೂ ಹೆಚ್ಚು ಕಡತಗಳನ್ನು ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ಸೇರಿದಂತೆ ಎಲ್ಲಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ 6 ತಿಂಗಳಿಗೂ ಹೆಚ್ಚು ಕಾಲದಿಂದ ಬಾಕಿ ಇರುವ ಮೋಜಿಣಿ ತಿದ್ದುಪಡಿಯ 261 ಕಡತ, 3 ಮತ್ತು 9 ತಿದ್ದುಪಡಿಯ 169 ಹಾಗೂ ಪೈಕಿ ಆರ್ ಟಿಸಿ ಒಟ್ಟುಗೂಡಿಸುವುದರಲ್ಲಿ ಬಾಕಿ ಇರುವ 42 ಕಡತಗಳನ್ನು ವಿಲೇವಾರಿ ಮಾಡಲು ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭ ಶಿರಸ್ತೆದಾರ್ ಟ್ರಿಜಾ, ನಂದಕುಮಾರ್ ಕಂದಾಯಾಧಿಕಾರಿ ಪ್ರದೀಪ್, ಶ್ರೀಧರ್ ಸೇರಿದಂತೆ ಎಲ್ಲಾ ಗ್ರಾಮ ಲೆಕ್ಕಿಗರು ಹಾಗೂ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಮುನಿಯಪ್ಪ ಮತ್ತು ಮೇಲ್ವಿಚಾರಕ ಮಂಜುನಾಥ್ ಇದ್ದರು.